ಎಂ. ಎಂ. ಹೆಗ್ಡೆ ಪ್ರತಿಷ್ಠಾನ ಕುಂದಾಪುರ, ಕೊಡಮಾಡುವ ೨೦೨೬ರ ಸಾಲಿನ ಎಂ.ಎಂ. ಹೆಗ್ಡೆ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಚಂದ್ರಗೌಡ ಗೋಳಿಕೆರೆ ಅವರು ಆಯ್ಕೆಯಾಗಿರುತ್ತಾರೆ. ಪ್ರಶಸ್ತಿಯು ರೂ ೧೦,೦೦೦/- ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ದಿನಾಂಕ: ೨೫.೧.೨೦೨೬ರಂದು ನಡೆಯುವ ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ವಾರ್ಷಿಕೋತ್ಸವದಂದು ನೀಡಿ ಗೌರವಿಸಲಾಗುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನ ಇಡೂರು ಕುಂಜಾಡಿ ಗೋಳಿಕೆರೆ ಎಂಬಲ್ಲಿ ಮಂಜು ಗೌಡ ಮತ್ತು ತಾರಮ್ಮ ಗೌಡ್ತಿಯವರ ಪುತ್ರನಾಗಿ ಚಂದ್ರಗೌಡರು ಜನಿಸಿದರು. ಬಾಲ್ಯದಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾದ ಇವರು ಐದನೇ ತರಗತಿಯಲ್ಲಿರುವಾಗ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿ ಕಮಲಶಿಲೆ ಮಹಾಬಲ ದೇವಾಡಿಗರಿಂದ ಯಕ್ಷಗಾನ ಶಿಕ್ಷಣ ಪಡೆದು ಮಾರಣಕಟ್ಟೆ ಮೇಳಕ್ಕೆ ಪಾದಾರ್ಪಣೆ ಮಾಡಿದರುಡ್. ನಂತರ ಹಾಲಾಡಿ ಮೇಳದಲ್ಲಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ತಮ್ಮ ಕಲಾಸೇವೆ ಮುಂದುವರಿಸಿದ್ದಾರೆ. ಗತ್ತು-ಗಾಂಭೀರ್ಯದ ರಂಗನಡೆ, ಮುಖದಲ್ಲಿ ರಾಜಕಳೆ ಹಾಗೂ ಶ್ರುತಿಬದ್ಧ ಮಾತುಗಾರಿಕೆಯಿಂದ ರಂಗಸ್ಥಳದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕಂಸ, ಹಿರಣ್ಯಕಶಿಪು, ರಾವಣ, ಕರ್ಣ, ಆಂಜನೇಯ, ಕೌರವ, ಭಸ್ಮಾಸುರ ಮೂಕಾಸುರ, ಆಂಜನೇಯ ಮುಂತಾದ ಪಾತ್ರಗಳಿಂದ ಇವರು ಪ್ರಸಿದ್ಧರಾಗಿದ್ದಾರೆ. ಹಿರಿಯ–ಕಿರಿಯ ಕಲಾವಿದರೊಂದಿಗೆ ೪೫ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಇವರು “ಯಕ್ಷತೇಜಸ್ವಿ” ಎಂಬ ಬಿರುದು ಸೇರಿದಂತೆ ನಾಡಿನಾದ್ಯಂತ ಅನೇಕ ಸನ್ಮಾನ–ಪುರಸ್ಕಾರಗಳನ್ನು ಪಡೆದಿದ್ದಾರೆ.

No comments:
Post a Comment