ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ ಪ್ರಶಸ್ತಿಯನ್ನು ಯಕ್ಷಗಾನ ಕೇಂದ್ರ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಇವರ ಸಹಯೋಗದಲ್ಲಿ ಕೊಡಮಾಡಲಿದ್ದು, ೨೦೨೬ನೇ ವರ್ಷದ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಶ್ರೀಯುತ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ ೨೫,೦೦೦/-ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ದಿನಾಂಕ: ೦೧.೦೮.೨೦೨೬ರಂದು ಸಂಜೆ ೪.೦೦ ಗಂಟೆಗೆ, ಉಡುಪಿ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಅತ್ಯಂತ ಪ್ರತಿಭಾವಂತ ಮತ್ತು ಜನಪ್ರಿಯ ಸ್ತ್ರೀವೇಷಧಾರಿ ಎಂದೇ ಪ್ರಸಿದ್ಧರಾದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರು ಹೊನ್ನಾವರ ತಾಲೂಕಿನ ಯಲಗುಪ್ಪದಲ್ಲಿ ಶ್ರೀ ವಿಷ್ಣು ಹೆಗಡೆ ಹಾಗೂ ಶ್ರೀಮತಿ ಇಂದಿರಾ ಹೆಗಡೆಯವರ ಮಗನಾಗಿ ಜನಿಸಿದರು. ಇವರು ಕನ್ನಡ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಅವರ ಯಕ್ಷಗಾನ ಗುರು ಶ್ರೀ ಹೆರಂಜಾಲು ವೆಂಕಟರಮಣ ಗಾಣಿಗರು. ಗುಂಡಬಾಳ ಮೇಳ, ಮಂದಾರ್ತಿ, ಮಾರಣಕಟ್ಟೆ, ಕಮಲಶಿಲೆ, ಸಾಲಿಗ್ರಾಮ, ಹೊಸನಗರ ಮೇಳಗಳಲ್ಲಿ ತಿರುಗಾಟ ಮಾಡಿ ಪ್ರಸ್ತುತ ಪೆರ್ಡೂರು ಮೇಳದಲಿ ಯಕ್ಷ ಗಾನ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಅಲ್ಲದೆ ಯಕ್ಷಗಾನ ಕಲೆಯನ್ನು ಹೊರದೇಶಗಳಲ್ಲಿಯೂ ಪಸರಿಸುವುದಕ್ಕೆ ಕಾರಣರಾಗಿದ್ದಾರೆ. ಎಲ್ಲಾ ಸ್ತ್ರೀವೇಷಗಳಲ್ಲಿ ಪ್ರಸಿದ್ಧರಾದ ಶ್ರೀ ಹೆಗಡೆಯವರು ಮುಖ್ಯವಾಗಿ ಪ್ರಭಾವತಿ, ಮೇನಕಿ, ರಂಭೆ, ದಾಕ್ಷಾಯಣಿ ಪಾತ್ರಗಳಿಗೆ ಜೀವತುಂಬಿದ್ದಾರೆ. ಯಕ್ಷಗಾನದಲ್ಲಿ ಹರಿವಾಣ ನೃತ್ಯ ಇವರ ವಿಶೇಷತೆಯಾಗಿದೆ. ಯಕ್ಷಗಾನ ಹಾಡುಗಾರಿಕೆ ಹಾಗೂ ಪುರುಷವೇಷಗಳ ನಿರ್ವಹಣೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ವ್ಯಾಕರಣಶುದ್ಧ ಶಬ್ದೋಚ್ಚಾರ, ಪ್ರೌಢ ಮಾತುಗಾರಿಕೆ, ಯಕ್ಷಗಾನ ಶೈಲಿಯ ಕಂಠಸ್ವರ, ಪಾತ್ರದ ಚೌಕಟ್ಟಿನೊಳಗೇ ನಿರೂಪಣೆ, ನಾಜೂಕು ಅಭಿನಯದ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅವರನ್ನು ಅನೇಕ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.



.jpg)







