Wednesday, August 12, 2026

ನಾಡೋಜ ಶ್ರೀ ಕೆ.ಪಿ ರಾವ್ ಅವರಿಗೆ ಡಾ. ಯು.ಪಿ ಉಪಾಧ್ಯಾಯ-ಡಾ. ಸುಶೀಲಾ ಉಪಾಧ್ಯಾಯ ಪ್ರಶಸ್ತಿ

 

ಭಾರತೀಯ ಭಾಷಾ ಗಣಕ ಪಿತಾಮಹ ನಾಡೋಜ ಶ್ರೀ ಕೆ.ಪಿ ರಾವ್ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಕೊಡಮಾಡುವ ಡಾ. ಯು.ಪಿ ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಹುಭಾಷಾ ವಿದ್ವಾಂಸರು, ಹಾಗೂ ತುಳುನಿಘಂಟು ರಚನೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಡಾ. ಯು.ಪಿ ಉಪಾಧ್ಯಾಯ ಮತ್ತು ಡಾ.ಸುಶೀಲಾ ಪಿ. ಉಪಾಧ್ಯಾಯ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ರೂ. ಹತ್ತುಸಾವಿರ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಕಾರ್ಯಕ್ರಮವು ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಶ್ರೀ ಕೆ.ಪಿ ರಾವ್ ಅವರು ೧೯೪೦ರ ಫೆಬ್ರವರಿ ೨೯ರಂದು ಮಂಗಳೂರು ಸಮೀಪದ ಕಿನ್ನಿಕಂಬಳದಲ್ಲಿ ಜನಿಸಿದರು. ೧೯೫೯ರಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದರು. ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ (ಖಿIಈಖ)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರಾಗಿ ವೃತ್ತಿಜೀವನ ಆರಂಭಿಸಿದ ಅವರು, ೧೯೭೦ರ ದಶಕದಲ್ಲಿ ಟಾಟಾ ಪ್ರೆಸ್‌ಗೆ ಸೇರ್ಪಡೆಯಾದ ನಂತರ ಅಕ್ಷರ, ಮುದ್ರಣ ಮತ್ತು ಭಾಷಾ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದರು. ಬಳಿಕ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ಎಕ್ಸ್ಪ್ರೆಸ್ ಮತ್ತು ಅಡೋಬ್ ಸಿಸ್ಟಂಸ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಸಲಹೆಗಾರರಾಗಿ ಹಾಗೂ ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಭಾರತೀಯ ಭಾಷೆಗಳ ಗಣಕೀಕರಣದಲ್ಲಿ ಶ್ರೀ ಕೆ. ಪಿ. ರಾವ್ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಉಚ್ಚಾರಣಾತ್ಮಕ ತರ್ಕವನ್ನು ಆಧರಿಸಿ ಕೀಲಿಮಣೆ ವಿನ್ಯಾಸ ರೂಪಿಸುವ ಮೂಲಕ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಸುಲಭವಾಗಿ ಬಳಸಲು ಸಹಕಾರಿಯಾದರು. ಕನ್ನಡ ಕೀಲಿಮಣೆ ವಿನ್ಯಾಸವನ್ನು ಅಭಿವೃದ್ಧಿಪಡಿಸಿ, ‘ಸೇಡಿಯಾಪು’ ಕನ್ನಡ ಪದಸಂಸ್ಕಾರಕ ತಂತ್ರಾಂಶವನ್ನು ರಚಿಸಿ ಮುಕ್ತ ಬಳಕೆಗೆ ನೀಡಿದರು. ಅವರ ಪ್ರಮುಖ ಕೃತಿ ‘ವರ್ಣಕ’. ಅವರ ಕನ್ನಡ ಕೀಲಿಮಣೆ ವಿನ್ಯಾಸಕ್ಕೆ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವೆಂಬ ಮಾನ್ಯತೆ ದೊರೆತಿದೆ. ತುಳು ಅಕಾಡೆಮಿ ಸೇರಿದಂತೆ ಹಲವು ಸಂಸ್ಥೆಗಳು ಅವರನ್ನು ಗೌರವಿಸಿದ್ದು, ೨೦೦೯ರ ಆಳ್ವಾಸ್ ನುಡಿಸಿರಿ ಸನ್ಮಾನ, ೨೦೧೩ರ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ೨೦೨೧ರ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಸಂದಿವೆ. ಅವರ ಜೀವನ ಮತ್ತು ಸಾಧನೆಗಳನ್ನು ಕುರಿತು ‘ಕಂಪ್ಯೂಟರ್, ಕನ್ನಡ, ಕೆ. ಪಿ. ರಾವ್’ (೨೦೧೩), ‘ಭಾರತೀಯ ಭಾಷಾ ಗಣಕ ಪಿತಾಮಹ ನಾಡೋಜ ಕೆ. ಪಿ. ರಾವ್’ (೨೦೨೦) ಮತ್ತು ‘ನಾಡೋಜ ಕೆ. ಪಿ. ರಾಯರ ನಾಡಿ, ನಡೆ, ನುಡಿ’ (೨೦೨೦) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ.


ರಂಗನಾಥ ದಿನಾಚರಣೆ ಕಾರ್ಯಕ್ರಮ (12.08.2026)

 



ನವಭಾರತದ ಗ್ರಂಥಾಲಯದ ಪರಿಕಲ್ಪನೆಗೆ ಹೊಸದಿಕ್ಕನ್ನು ಕಲ್ಪಿಸಿಕೊಟ್ಟ ಕೀರ್ತಿ ಡಾ. ಎಸ್. ಆರ್. ರಂಗನಾಥನ್ ಅವರಿಗೆ ಸಲ್ಲುತ್ತದೆ.  ಅವರ ಅದಮ್ಯವಾದ ಪುಸ್ತಕ ಪ್ರೀತಿ ಅವರನ್ನು (ಭಾರತದ ಗ್ರಂಥಾಲಯ ವಿಜ್ಞಾನ) ಗ್ರಂಥಾಲಯ ವಿಜ್ಞಾನದ ಪಿತಾಮಹನನ್ನಾಗಿ ರೂಪಿಸಿದೆ. ಅವರು ಅಂದು ರೂಪಿಸಿದ ವ್ಯವಸ್ಥೆಯಿಂದಾಗಿ ಶಾಲಾಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಗ್ರಂಥಾಲಯ ಆಧುನಿಕ ವ್ಯವಸ್ಥೆಯೊಂದಿಗೆ ಪರಿವರ್ತನೆಗೊಂಡಿದೆ ಎಂಬುದಾಗಿ ಎಂ.ಜಿ.ಎಂ. ಕಾಲೇಜಿನ ಗ್ರಂಥಪಾಲಕರಾದ ಶ್ರೀ ಕಿಶೋರ್ ಕುಮಾರ್ ಹೇಳಿದರು. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಆಗಸ್ಟ್ ೧೨, ೨೦೨೬ರಂದು ಹಮ್ಮಿಕೊಳ್ಳಲಾದ ರಂಗನಾಥನ್ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  ಡಾ. ಎಸ್.ಆರ್. ರಂಗನಾಥನ್ ಅವರು ಅಗೋಸ್ಟ್ ೧೨, ೧೮೯೨ರಲ್ಲಿ ಜನಿಸಿದರು.  ಅವರ ಕೊಡುಗೆಗಳೆಂದರೆ ಗ್ರಂಥಾಲಯದ ಪಂಚಸೂತ್ರಗಳು ಮತ್ತು ಕೊಲೊನ್ ವರ್ಗೀಕರಣ.  ಗ್ರಂಥಾಲಯದ ಬಗ್ಗೆ ಮಾಡಿದ ಸಾಧನೆ, ನೀಡಿದ ಕೊಡುಗೆ ಹಾಗೂ ಅವರ ಸೇವೆಗಾಗಿ ಅವರನ್ನು ಗ್ರಂಥಾಲಯದ ಪಿತಾಮಹ ಎಂದು ಕರೆಯುತ್ತಾರೆ.  ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಆಗಿ ಆಚರಿಸಲಾಗುತ್ತದೆ ಎಂದರು. ಎಂ.ಜಿ.ಎಂ ಕಾಲೇಜಿನ ಗಾಂಧಿಯನ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಶ್ರೀ ವಿನಿತ್ ರಾವ್, ಆರ್.ಆರ್.ಸಿ ಸಹಸಂಶೋಧಕ ಡಾ. ಎಸ್.ಆರ್. ಅರುಣ್ ಕುಮಾರ್ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.


Monday, August 3, 2026

ಪ್ರೊ. ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿಗೆ ಪ್ರೊ. ಕನರಾಡಿ ವಾದಿರಾಜ ಭಟ್ ಆಯ್ಕೆ

 

ಸಾಹಿತ್ಯ, ಶಿಕ್ಷಣ, ಆಡಳಿತ, ಸಂಘಟನೆ, ಜಾನಪದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸಾಧನೆ ಸಿದ್ಧಿಗಳಿಂದ ಲೋಕ ವಿಖ್ಯಾತರಾದ ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿಗೆ ಪ್ರಸಿದ್ಧ ಜಾನಪದ ವಿದ್ವಾಂಸರು, ಸಂಶೋಧಕರು, ಲೇಖಕರಾದ ಕನರಾಡಿ ವಾದಿರಾಜ ಭಟ್ ಅವರು ಆಯ್ಕೆಯಾಗಿರುತ್ತಾರೆ. ಪ್ರಶಸ್ತಿಯು ರೂ ೨೦೦೦೦/- (ಇಪ್ಪತ್ತು ಸಾವಿರ) ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ, ಕಾರ್ಯಕ್ರಮ ಸದ್ಯದಲ್ಲೇ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಕನರಾಡಿ ವಾದಿರಾಜ ಭಟ್ ಅವರು ಕರಾವಳಿಯ ಪ್ರಸಿದ್ಧ ಜಾನಪದ ವಿದ್ವಾಂಸರು, ಸಂಶೋಧಕರು, ಲೇಖಕರು ಹಾಗೂ ಕನ್ನಡ–ತುಳು ಸಾಹಿತ್ಯದ ಹಿರಿಯ ಚಿಂತಕರಾಗಿದ್ದಾರೆ. ೧೯೫೧ರ ಜುಲೈ ೨ರಂದು ಉಡುಪಿ ಜಿಲ್ಲೆಯ ಮಣಿಪುರ ಗ್ರಾಮದ ಕನರಾಡಿಯಲ್ಲಿ ಕನರಾಡಿ ಲಕ್ಷ್ಮೀನಾರಾಯಣ ಭಟ್ ಮತ್ತು ಕಮಲಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಅವರು, ಬಾಲ್ಯದಿಂದಲೇ ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಅಧ್ಯಯನದತ್ತ ಅಪಾರ ಆಸಕ್ತಿ ಬೆಳೆಸಿಕೊಂಡವರು. ಶಿಕ್ಷಣದ ಜೊತೆಗೆ ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಅಧ್ಯಯನ ಮತ್ತು ದಾಖಲಾತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಕನ್ನಡ ಮತ್ತು ತುಳು ಜಾನಪದ ಸಾಹಿತ್ಯದ ಸಂಶೋಧನೆ, ಸಂಗ್ರಹ ಹಾಗೂ ಪ್ರಕಟಣೆಯಲ್ಲಿ ಡಾ. ಕನರಾಡಿ ವಾದಿರಾಜ ಭಟ್ ಅವರ ಸೇವೆ ವಿಶಿಷ್ಟವಾಗಿದೆ. ‘ಪಾಡ್ದನಗಳು’, ‘ಜೋಕ್ಲೆ ಪದೋಕ್ಲು’, ‘ತುಳುಜನಪದ ಕತೆಗಳು’, ‘ಮೂಕಜ್ಜಿ’, ಮಗೆ ಬರೆವು ಕಲ್ತೆ, ಮೂಕಾಂಬಿಕಾ ಕ್ಷೇತ್ರ ಕೊಲ್ಲೂರು ಮುಂತಾದುವು ಅವರ ಪ್ರಕಟಣೆಗಳು. ‘ಯಕ್ಷದೀಪಿಕ’,  ‘ಹಸನ್ಮುಖಿ’, ‘ಅಜ್ಜಿ ಸಾಕಿದ ಮಗ’, ‘ಬನದ ಸಿರಿ’, ‘ಕರ್ನಾಟಕ ದರ್ಶನ’, ‘ಅಮೃತ ಪುರುಷ’ ಮುಂತಾದುವು ಅವರ ಸಂಪಾದಿತ ಕೃತಿಗಳು. ಸುಮಾರು ೧೫೦ಕ್ಕೂ ಹೆಚ್ಚು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿಯಲ್ಲಿ ನಾಟಕ, ವಿಚಾರಗೋಷ್ಟಿಗಳಂತಹ ಕಾರ್ಯಕ್ರಮ, ದೂರದರ್ಶನದಲ್ಲಿ ಜನಪದ ಕಾರ್ಯಕ್ರಮಗಳು, ಪ್ರವಚನಗಳನ್ನು ನೀಡಿದ್ದಾರೆ. ಇವರ ‘ಬಸ್ರೂರು ಅಧ್ಯಯನ’ ಗ್ರಂಥ ಮಂಗಳೂರು ವಿ.ವಿ ಪ್ರಾದೇಶಿಕ ಅಧ್ಯಯನ ವಿಷಯಕ್ಕೆ ಪಠ್ಯವಾಗಿದೆ. ಕನ್ನಡ ಜನಪದ ನಿಘಂಟುಗೆ ಉಡುಪಿ ಜಿಲ್ಲೆಯ ಜಾನಪದ ತಜ್ಞರಾಗಿ ಆಯ್ಕೆಯಾಗಿದ್ದಾರೆ. ವಿವಿಧ ಪತ್ರಿಕೆಗಳಿಗೆ ಅಂಕಣ ಬರೆದಿದ್ದಾರೆ.  ಮೌಲ್ಯ ಶಿಕ್ಷಣ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅಮೂಲ್ಯ ಸಾಹಿತ್ಯ–ಸಾಂಸ್ಕೃತಿಕ ಸೇವೆಯನ್ನು ಗೌರವಿಸಿ ಅವರಿಗೆ  ಯುವ ಜೇಸೀ ಪ್ರಶಸ್ತಿ, ಭಾರತಭೂಷಣ ಪ್ರಶಸ್ತಿ, ಕನ್ನಡ ರತ್ನರಾಜ್ಯ ಪ್ರಶಸ್ತಿ, ಕಾರಂತ ಸದ್ಭಾವನಾ ಪ್ರಶಸ್ತಿ, ತುಳು ಅಕಾಡೆಮಿ ಗೌರವ ಪ್ರಶಸ್ತಿ, ಜಾನಪದ ಲೋಕ ವಿಶೇಷ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ ಪ್ರಶಸ್ತಿ ಪೊಟೋ ಮತ್ತು ವರದಿ

 







ಪ್ರಶಸ್ತಿ ಸ್ವೀಕಾರದ ಅವಕಾಶ ದೇವರು ಕೊಟ್ಟ ಆಶೀರ್ವಾದ. ಭಾಗವತಿಕೆ ಕಲಿಯಲು ಕೆರೆಮನೆ ಕೇಂದ್ರಕ್ಕೆ ಬಂದಿದ್ದ ನಾನು ಯಕ್ಷಗುರು ಹೆರಂಜಾಲು ವೆಂಕಟರಮಣ ಗಾಣಿಗ ಅವರ ಆಶಯದಂತೆ ಸ್ತ್ರೀವೇಷಧಾರಿಯಾಗಿ ಪ್ರೇಕ್ಷಕರ ಮನಗೆಲ್ಲಲು ಇಂದು ಸಫಲನಾಗಿದ್ದೇನೆ. ನಾನಿಂದು  ಹೆಸರು ಗಳಿಸಲು ವೇದಿಕೆ ಒದಗಿಸಿದ ಮೇಳಗಳ ಯಜಮಾನರನ್ನು ಮರೆಯಲು ಸಾಧ್ಯವಿಲ್ಲ. ಅವರ ಋಣ ತೀರಿಸಲಾಗದು ಎಂದು ಖ್ಯಾತ ಸ್ತ್ರೀವೇಷಧಾರಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಹೇಳಿದರು. ಅವರು ದಿನಾಂಕ: ..೨೦೨೬ರ ಶನಿವಾರದಂದು ಉಡುಪಿ ಅಜ್ಜರಕಾಡು ಪುರಭವನದಲ್ಲಿ ಯಕ್ಷಗಾನ ಕೇಂದ್ರ, ಇಂದ್ರಾಳಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಉಜ್ವಲ ಡೆವಲಪರ್ಸ್ ಆಶ್ರಯದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್  ಯಕ್ಷಸಾಧಕ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಪ್ರಶಸ್ತಿಯನ್ನು ಮೊದಲು  ನಾಲ್ವರು ಪುರುಷ ಪಾತ್ರಧಾರಿಗಳಿಗೆ ನೀಡಲಾಗಿದೆ. ಯಲಗುಪ್ಪ ಅವರು ಸ್ತ್ರೀ ಪಾತ್ರಧಾರಿಯಾಗಿರುವಾಗ ಅವರ ಹಾವಭಾವ, ಮಾತು, ನೃತ್ಯ ಯಾರಿಂದಲೂ ಮೀರಿಸಲಾಗದುಇಂತಹ ಶ್ರೇಷ್ಠ ಕಲಾವಿದರನ್ನು ಗೌರವಿಸುವುದು ನಮಗೆ ಬಹು ಹೆಮ್ಮೆಯ ವಿಚಾರ. ಇದರೊಂದಿಗೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಮೇಳ ನಡೆಸುತ್ತಿರುವ ಯಜಮಾನರನ್ನು ಪ್ರೋತ್ಸಾಹಿಸಲು ಟ್ರಸ್ಟ್ ವತಿಯಿಂದ ಯಕ್ಷಪೋಷಕ ಗೌರವ ಪುರಸ್ಕಾರ ನೀಡಲಿದ್ದೇವೆ. ಆಗಸ್ಟ್ ೨೩, ೨೦೨೬ರಂದು ಇದೇ ಪುರಭವನದಲ್ಲಿ ಪೆರ್ಡೂರು ಮೇಳದ ಯಜಮಾನರಾದ ಶ್ರೀ ವೈ. ಕರುಣಾಕರ ಶೆಟ್ಟಿಯವರಿಗೆ ನೀಡಲಾಗುತ್ತಿದೆ ಎಂದರು.

ಜಿ.ಶಂಕರ್ ಫ್ಯಾಮಿಲಿ ಟ್ರಸಸ್ಟಿನ ಪ್ರವರ್ತಕ ಡಾ ಜಿ.ಶಂಕರ್, ಉಜ್ವಲ್ ಡೆವಲಪರ್ಸ್ ಎಂ.ಡಿ ಪುರುಷೋತ್ತಮ ಶೆಟ್ಟಿ, ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಸಲಹಾಸಮಿತಿ ಅಧ್ಯಕ್ಷರಾದ ಮೇಳಗಳ ಯಜಮಾನರೂ ಆದ ಪಳ್ಳಿ ಕಿಶನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ನಾಗರಾಜ ಶಂಕರನಾರಾಯಣ ಗಣಪತಿ ಸ್ತುತಿಯೊಂದಿಗೆ ಪ್ರಾರ್ಥಿಸಿದರು. ಶ್ರೀ ಭುವನ ಪ್ರಸಾದ್ ಹೆಗ್ಡೆ ಪ್ರಶಸ್ತಿ ಪತ್ರ ವಾಚಿಸಿದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಎಂ.ಜಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಒಗ್ಗೂಡುವಿಕೆಯಲ್ಲಿ ತಾಮ್ರಧ್ವಜ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

Thursday, July 30, 2026

ವೈ .ಕರುಣಾಕರ ಶೆಟ್ಟಿ , ಯಕ್ಷಗಾನ ಮೇಳಗಳ ಯಜಮಾನರಿಗೆ ಯಕ್ಷಪೋಷಕ ಗೌರವ ಪ್ರಶಸ್ತಿ

 

ವೈ. ಕರುಣಾಕರ ಶೆಟ್ಟಿ ಅವರು ಕರಾವಳಿಯ ಹಲವು ಯಕ್ಷಗಾನ ಮೇಳಗಳ ಯಜಮಾನರು ಹಾಗೂ ಹೆಸರಾಂತ ಕಲಾ ಸಂಘಟಕರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ೪೫ಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿರುವ ಅವರು, ಕಳೆದ ೪ ದಶಕಗಳಿಂದ  ಪೆರ್ಡೂರಿನ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ, ಜೊತೆಗೆ ಶ್ರೀ ಕ್ಷೇತ್ರ ಹಾಲಾಡಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಸಿಗಂದೂರು ಮೇಳವನ್ನೂ ಸಮರ್ಥವಾಗಿ ಮುನ್ನಡೆಸುತ್ತಾ ಗುಣಮಟ್ಟದ ಯಕ್ಷಗಾನಪ್ರದರ್ಶನಗಳಿಗೆ ಕಾರಣೀಭೂತರಾಗಿದ್ದಾರೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಕಲಾವಿದರ ಬದುಕಿಗೆ ಆಸರೆಯಾಗಿದ್ದವರು. 

ಅವರ ಸುದೀರ್ಘ ಕಲಾಸೇವೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಗಮನಿಸಿ ನೂರಕ್ಕೂ ಹೆಚ್ಚು ಸನ್ಮಾನಗಳು ಹಾಗೂ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಯಕ್ಷಗಾನ ಕ್ಷೇತ್ರದ ಅಭಿವೃದ್ಧಿಗೆ  ಇವರು ಸಲ್ಲಿಸಿರುವ ಸೇವೆ ಕರಾವಳಿಯ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಇವರಿಗೆ ೨೦೨೬ನೇ ಸಾಲಿನ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.,) ಉಡುಪಿ ಪ್ರಾಯೋಜಿತ ಯಕ್ಷಪೋಷಕ ಗೌರವ ಪ್ರಶಸ್ತಿಯನ್ನು ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಸಹಯೋಗದೊಂದಿಗೆ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ದಿ. ೨೩.೦೮.೨೦೨೬ರ ಆದಿತ್ಯವಾರದಂದು ಉಡುಪಿಯ ಪುರಭವನದಲ್ಲಿ ನಡೆಯಲಿದೆ. ಅಂದು ಪ್ರಸಿದ್ಧ ಯಕ್ಷಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಾರ್ಜುನ ಕಾಳಗ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ ಎಂದು ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸೇಡಿಯಾಪು ಪ್ರಶಸ್ತಿ ಕಾರ್ಯಕ್ರಮ, ೨೮.೦೭.೨೦೨೬ ಮೈಸೂರಿನಲ್ಲಿ

 







ಇಂದು ಗ್ರಂಥಸಂಪಾದನೆ, ಸಂಶೋಧನೆಯ ಕೆಲಸಗಳು ಕನ್ನಡದ ಸಂದರ್ಭದಲ್ಲಿ ತುಂಬಾ ನಿಧಾನವಾಗುತ್ತಿವೆ. ಕಾರಣಗಳು ಹಲವಾರು. ಈ ಕ್ಷೇತ್ರದಲ್ಲಿ ಆಸಕ್ತಿವುಳ್ಳವರು ಕಡಿಮೆ ಮತ್ತು ಈ ಕ್ಷೇತ್ರಕ್ಕೆ ಬಂದವರು ಉದ್ಯೋಗಾವಕಾಶವನ್ನು ಬಯಸಿದರೆ ಅದಕ್ಕೆ ಇಂದು ಅವಕಾಶಗಳು ಕಡಿಮೆ. ಹತ್ತಾರು ವರುಷಗಳ ಹಿಂದೆ ತಾತ್ತಿ÷್ವಕಶುದ್ಧತೆಯಿಂದ, ಬದ್ಧತೆಯಿಂದ ಇಂತಹ ಗಹನವಾದ ವಿಚಾರಗಳನ್ನು ಬಹುಗೌರವದಿಂದ ಮಾಡುತ್ತಿದ್ದರು. ಹೀಗಾಗಿ ದಾಸಸಾಹಿತ್ಯದ ಜನಪ್ರಿಯ ಪಠ್ಯ ಹಾಗೂ ಅಧ್ಯಯನಯುಕ್ತ ಸಂಶೋಧನ ಪಠ್ಯಗಳೆಂಬ ಎರಡು ಬಗೆಯ ರೂಪಗಳಲ್ಲಿ ಓದುಗರಿಗೆ ಲಭಿಸುತ್ತಿತ್ತು. ಸಂಶೋಧಿತ ಪಠ್ಯಗಳನ್ನು ಹೊರತರುವಲ್ಲಿ ಅಪಾರ ಶ್ರಮ ಬೇಕಾಗುತ್ತಿತ್ತು. ಕರ್ನಾಟಕದಲ್ಲಿ ಪ್ರೊ. ಜಿ. ವರದರಾಜ ರಾಯರು ದಾಸಸಾಹಿತ್ಯದ ಸಂಶೋಧನೆ ಸಂಪಾದನೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು. ಅನಂತರದಲ್ಲಿ ಡಾ. ಟಿ. ಎನ್. ನಾಗರತ್ನ ಅವರು ಆ ಹಾದಿಯಲ್ಲಿ ನಡೆದು ದಾಸಸಾಹಿತ್ಯದ ಅಧಿಕೃತ ಪಠ್ಯಗಳಿಗೆ  ಬುನಾದಿ ಹಾಡಿದರು.  ಸದಾ ಅಧ್ಯಯನಶೀಲರಾದ ಡಾ. ಟಿ.ಎನ್. ನಾಗರತ್ನ ಅವರು ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಮೌಲಿಕ ಕೃತಿಗಳನ್ನು  ನೀಡಿದ್ದಾರೆ.  ಹಾಗಾಗಿ ಅವರ ಹೆಸರು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಂದೂ ಮರೆಯಾಗದು. ಇಂತಹ  ಶ್ರೇಷ್ಠ ಸಂಶೋಧಕಿ, ಗ್ರಂಥ ಸಂಪಾದಕಿಗೆ ಸೇಡಿಯಾಪು ಪ್ರಶಸ್ತಿ ಬಂದಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂಬುದಾಗಿ ನಾಡಿನ ಹಿರಿಯ ವಿದ್ವಾಂಸರೂ, ಸಂಶೋಧಕರು ಆದ ಪ್ರೊ. ಟಿ.ವಿ ವೆಂಕಟಾಚಲ ಶಾಸ್ತ್ರಿ ಹೇಳಿದರು. ಅವರು ಇತ್ತೀಚೆಗೆ ಮೈಸೂರಿನಲ್ಲಿ ಡಾ.ಟಿ.ಎನ್. ನಾಗರತ್ನ ಅವರ ಸ್ವಗೃಹದಲ್ಲಿ  ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಮೂಲಕ ಕೊಡಮಾಡುವ ಸೇಡಿಯಾಪು ಪ್ರಶಸ್ತಿ ಪ್ರದಾನಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ನಾಡಿನ ಹಿರಿಯ ವಿದ್ವಾಂಸರೂ, ಸೇಡಿಯಾಪು ಪ್ರಶಸ್ತಿ ಆಯ್ಕೆ ಸಮಿತಿಯ ಹಿರಿಯ ಸದಸ್ಯರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಅಭಿನಂದನಾ ಮಾತುಗಳನ್ನಾಡಿದರು. ಡಾ. ಟಿ.ಎನ್. ನಾಗರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ,  ಇಂತಹ ಪ್ರಶಸ್ತಿಗಳು ಜೀವನದ ಸಂಭ್ರಮಗಳಲ್ಲೊಂದು. ಪ್ರಾತ: ಸ್ಮರಣೀಯರಾದ ಸೇಡಿಯಾಪು ಕೃಷ್ಣಭಟ್ಟರ ಹೆಸರಲ್ಲಿ ಪಡೆದ ಈ ಪ್ರಶಸ್ತಿ ನನ್ನ ಪುಟ್ಟ ಸಾಧನೆಗೆ ಗರಿಇಟ್ಟಂತಾಗಿದೆ ಎಂದರು. ಮುಳಿಯ ರಾಘವಯ್ಯ, ಪ್ರೊ. ಎಚ್.ಎಂ. ನಾಗರಾಜ ರಾವ್ ಮುಂತಾದ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ ಜಗದೀಶ್ ಶೆಟ್ಟಿ ಪ್ರಸ್ತಾವನೆಯ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಆರ್.ಆರ್.ಸಿಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು. ಆರ್.ಆರ್.ಸಿ.ಯ ವಿನೇಶ್ ಅವರು ಕಾರ್ಯಕ್ರಮ ರೂಪಿಸುವಲ್ಲಿ ಸಹಕರಿಸಿದರು.