ಸಾಹಿತ್ಯ, ಶಿಕ್ಷಣ, ಆಡಳಿತ, ಸಂಘಟನೆ, ಜಾನಪದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸಾಧನೆ ಸಿದ್ಧಿಗಳಿಂದ ಲೋಕ ವಿಖ್ಯಾತರಾದ ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿಗೆ ಪ್ರಸಿದ್ಧ ಜಾನಪದ ವಿದ್ವಾಂಸರು, ಸಂಶೋಧಕರು, ಲೇಖಕರಾದ ಕನರಾಡಿ ವಾದಿರಾಜ ಭಟ್ ಅವರು ಆಯ್ಕೆಯಾಗಿರುತ್ತಾರೆ. ಪ್ರಶಸ್ತಿಯು ರೂ ೨೦೦೦೦/- (ಇಪ್ಪತ್ತು ಸಾವಿರ) ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ, ಕಾರ್ಯಕ್ರಮ ಸದ್ಯದಲ್ಲೇ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಕನರಾಡಿ ವಾದಿರಾಜ ಭಟ್ ಅವರು ಕರಾವಳಿಯ ಪ್ರಸಿದ್ಧ ಜಾನಪದ ವಿದ್ವಾಂಸರು, ಸಂಶೋಧಕರು, ಲೇಖಕರು ಹಾಗೂ ಕನ್ನಡ–ತುಳು ಸಾಹಿತ್ಯದ ಹಿರಿಯ ಚಿಂತಕರಾಗಿದ್ದಾರೆ. ೧೯೫೧ರ ಜುಲೈ ೨ರಂದು ಉಡುಪಿ ಜಿಲ್ಲೆಯ ಮಣಿಪುರ ಗ್ರಾಮದ ಕನರಾಡಿಯಲ್ಲಿ ಕನರಾಡಿ ಲಕ್ಷ್ಮೀನಾರಾಯಣ ಭಟ್ ಮತ್ತು ಕಮಲಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಅವರು, ಬಾಲ್ಯದಿಂದಲೇ ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಅಧ್ಯಯನದತ್ತ ಅಪಾರ ಆಸಕ್ತಿ ಬೆಳೆಸಿಕೊಂಡವರು. ಶಿಕ್ಷಣದ ಜೊತೆಗೆ ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಅಧ್ಯಯನ ಮತ್ತು ದಾಖಲಾತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಕನ್ನಡ ಮತ್ತು ತುಳು ಜಾನಪದ ಸಾಹಿತ್ಯದ ಸಂಶೋಧನೆ, ಸಂಗ್ರಹ ಹಾಗೂ ಪ್ರಕಟಣೆಯಲ್ಲಿ ಡಾ. ಕನರಾಡಿ ವಾದಿರಾಜ ಭಟ್ ಅವರ ಸೇವೆ ವಿಶಿಷ್ಟವಾಗಿದೆ. ‘ಪಾಡ್ದನಗಳು’, ‘ಜೋಕ್ಲೆ ಪದೋಕ್ಲು’, ‘ತುಳುಜನಪದ ಕತೆಗಳು’, ‘ಮೂಕಜ್ಜಿ’, ಮಗೆ ಬರೆವು ಕಲ್ತೆ, ಮೂಕಾಂಬಿಕಾ ಕ್ಷೇತ್ರ ಕೊಲ್ಲೂರು ಮುಂತಾದುವು ಅವರ ಪ್ರಕಟಣೆಗಳು. ‘ಯಕ್ಷದೀಪಿಕ’, ‘ಹಸನ್ಮುಖಿ’, ‘ಅಜ್ಜಿ ಸಾಕಿದ ಮಗ’, ‘ಬನದ ಸಿರಿ’, ‘ಕರ್ನಾಟಕ ದರ್ಶನ’, ‘ಅಮೃತ ಪುರುಷ’ ಮುಂತಾದುವು ಅವರ ಸಂಪಾದಿತ ಕೃತಿಗಳು. ಸುಮಾರು ೧೫೦ಕ್ಕೂ ಹೆಚ್ಚು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿಯಲ್ಲಿ ನಾಟಕ, ವಿಚಾರಗೋಷ್ಟಿಗಳಂತಹ ಕಾರ್ಯಕ್ರಮ, ದೂರದರ್ಶನದಲ್ಲಿ ಜನಪದ ಕಾರ್ಯಕ್ರಮಗಳು, ಪ್ರವಚನಗಳನ್ನು ನೀಡಿದ್ದಾರೆ. ಇವರ ‘ಬಸ್ರೂರು ಅಧ್ಯಯನ’ ಗ್ರಂಥ ಮಂಗಳೂರು ವಿ.ವಿ ಪ್ರಾದೇಶಿಕ ಅಧ್ಯಯನ ವಿಷಯಕ್ಕೆ ಪಠ್ಯವಾಗಿದೆ. ಕನ್ನಡ ಜನಪದ ನಿಘಂಟುಗೆ ಉಡುಪಿ ಜಿಲ್ಲೆಯ ಜಾನಪದ ತಜ್ಞರಾಗಿ ಆಯ್ಕೆಯಾಗಿದ್ದಾರೆ. ವಿವಿಧ ಪತ್ರಿಕೆಗಳಿಗೆ ಅಂಕಣ ಬರೆದಿದ್ದಾರೆ. ಮೌಲ್ಯ ಶಿಕ್ಷಣ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅಮೂಲ್ಯ ಸಾಹಿತ್ಯ–ಸಾಂಸ್ಕೃತಿಕ ಸೇವೆಯನ್ನು ಗೌರವಿಸಿ ಅವರಿಗೆ ಯುವ ಜೇಸೀ ಪ್ರಶಸ್ತಿ, ಭಾರತಭೂಷಣ ಪ್ರಶಸ್ತಿ, ಕನ್ನಡ ರತ್ನರಾಜ್ಯ ಪ್ರಶಸ್ತಿ, ಕಾರಂತ ಸದ್ಭಾವನಾ ಪ್ರಶಸ್ತಿ, ತುಳು ಅಕಾಡೆಮಿ ಗೌರವ ಪ್ರಶಸ್ತಿ, ಜಾನಪದ ಲೋಕ ವಿಶೇಷ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.




.jpg)
