Monday, August 31, 2026

ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಕಾರ್ಯಕ್ರಮ (ದಿನಾಂಕ: 29.08.2026)

 







ಯುದ್ಧ ವಿರೋಧಿ ನೀತಿಯು ಕೃತಿಯ ಒಟ್ಟು ಆಶಯವಾಗಿದೆ. ಯುದ್ಧ ಸಂದರ್ಭದಲ್ಲಿ ಅರ್ಥ ವ್ಯವಸ್ಥೆ ಮಾರುಕಟ್ಟೆ ನೀತಿ, ನಿರೂಪಕರು ಸಮಾಜದ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಾರೆ ಎಂಬುದನ್ನು ಬಿಂಬಿಸುತ್ತದೆ. ಶಾಲೆ, ಆಸ್ಪತ್ರೆಗಳ ಮೇಲೆ ದಾಳಿ ಮಾಡಬಾರದೆನ್ನುವ ನೀತಿ ನಿಯಮಗಳಿದ್ದರೂ ಯುದ್ಧ ಆರಂಭವಾದರೆ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಇದು ಮಹಾಭಾರತ ಕಾಲದಿಂದಲೂ ನಡೆದು ಬಂದಿದೆ ಎಂದು ಲೇಖಕಿ ಡಾ. ಮಾಧವಿ ಭಂಡಾರಿ ವಿಷಾದಿಸಿದ್ದಾರೆ.

ಅವರು ದಿನಾಂಕ ೨೯.೦೮.೨೦೨೬, ಶನಿವಾರದಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್  ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ  ಸಮಿತಿ ಸಹಯೋಗದಲ್ಲಿ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ ಸಭಾಂಗಣದಲ್ಲಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಆಯ್ಕೆಯಾದ  ಗೋಡೆಗೆ ನೇತು ಬಿದ್ದ ಭೂಪಟ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.  ಲಕ್ಷ್ಮಣ ವಿ. ಅವರ ಕೃತಿಯಲ್ಲಿನ ಕವಿತೆಗಳು ಭ್ರಮೆ ಮತ್ತು ವಾಸ್ತವದ ನಡುವೆ ಜೀಕಾಡುತ್ತವೆ. ಆದರೂ ವಾಸ್ತವವೇ ಕವಿತೆಗಳ ಜೀವಾಳವಾಗಿದೆ ಎಂದರು.   

ಬೆಳಗಾವಿಯ ಡಾ. ಲಕ್ಷ್ಮಣ ವಿ. ಅವರು ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶಿಫಾರಸುಅಡ್ಡ ದಾರಿ ಹಿಡಿದು ಪ್ರಶಸ್ತಿಗಳ ಘನತೆಹಾಳು ಮಾಡಬಾರದು. ಕಡೆಂಗೋಡ್ಲು ಶಂಕರ ಭಟ್ಟರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಭಾಜನವಾಗಿರುವುದು ನನ್ನ ಕಾವ್ಯಕ್ಕೆ ಸಂದ ಗೌರವ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂ.ಜಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಜಿ. ಪೈ ಮಾತನಾಡಿ ಸಾಹಿತ್ಯ ಬರಹಗಳು ಸಮಾಜಪರ ಧ್ವನಿಯಾಗಬೇಕು. ಸಾಮಾಜಿಕ ಜಾಲತಾಣ, ಒತ್ತಡ, ತಂತ್ರಜ್ಞಾನ, ವೇಗದ ಬದುಕಿನ ನಡುವೆ ಸಾಹಿತ್ಯದ ಅಗತ್ಯ ಹೆಚ್ಚಾಗಿದೆ. ಹಿರಿಯ ಸಾಹಿತಿ, ಲೇಖಕರ ಸಾಹಿತ್ಯದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಸಮಾಜ ಸಂವೇದನಾಶೀಲವಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರವಿರಾಜ್ ಶೆಟ್ಟಿ ಅವರು ಮಾತನಾಡಿ, ಕಡೆಂಗೋಡ್ಲು ಶಂಕರ ಭಟ್ಟರು ವಾಗ್ಮಯ ತಪಸ್ವಿಯಾಗಿದ್ದು, ಅವರ ಕಾವ್ಯವು ವಾಙ್ಮಯ ತಪಸ್ಸಾಗಿದೆ ಎಂದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಆರ್.ಸಿಯ ಸಹಾಯಕ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿನಿ ಕು. ಚೈತನ್ಯಾ ಎನ್ ಪ್ರಾರ್ಥಿಸಿದರು. ಕಡೆಂಗೋಡ್ಲು ಶಂಕರ ಭಟ್ಟರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

Monday, August 24, 2026

ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಕಾರ್ಯಕ್ರಮದ ಕರೆಯೋಲೆ (ದಿನಾಂಕ: 29.08.2026)

 


ಯಕ್ಷಪೋಷಕ ಗೌರವ ಪ್ರಶಸ್ತಿ ಕಾರ್ಯಕ್ರಮ (ದಿನಾಂಕ: 23.08.2026)

 







ಯಕ್ಷಗಾನ ಕಲಾಕ್ಷೇತ್ರದಲ್ಲಿ ಕಲಾವಿದರು ಬೆಳೆಯಲು ಮೇಳದ ಯಜಮಾನರೂ ಕಾರಣ. ವೈ ಕರುಣಾಕರ ಶೆಟ್ಟಿ ಅವರಿಗೆ ನೀಡಿರುವ ಯಕ್ಷಪೋಷಕ ಗೌರವ ಪ್ರಶಸ್ತಿಯಿಂದ ಈ ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎಂದು  ಮಾಹೆ ಸಹಕುಲಾಧಿಪತಿ, ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಇದರ ಅಧ್ಯಕ್ಷರಾದ  ಡಾ. ಎಚ್. ಎಸ್. ಬಲ್ಲಾಳ್ ಹೇಳಿದರು. ಅವರು  ದಿನಾಂಕ: ೨೩.೮.೨೦೨೬ರ ಶನಿವಾರದಂದು ಉಡುಪಿ ಅಜ್ಜರಕಾಡು ಪುರಭವನದಲ್ಲಿ ಯಕ್ಷಗಾನ ಕೇಂದ್ರ, ಇಂದ್ರಾಳಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಉಜ್ವಲ ಡೆವಲಪರ್ಸ್ ಆಶ್ರಯದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ.) ಪ್ರಾಯೋಜಿತ ಯಕ್ಷಪೋಷಕ ಗೌರವ ಪ್ರಶಸ್ತಿಯನ್ನು ಯಕ್ಷಗಾನ ಮೇಳಗಳ ಯಜಮಾನರಾದ ವೈ. ಕರುಣಾಕರ ಶೆಟ್ಟಿ  ಅವರಿಗೆ  ಟ್ರಸ್ಟ್ ವತಿಯಿಂದ ಪ್ರದಾನ ಮಾಡಿ ಮಾತನಾಡುತ್ತಿದ್ದರು.  ಕಲಾವಿದರಿಗೆ ಮಾತ್ರವಲ್ಲದೆ ಕಲಾಪೋಷಕರಾದ ಮೇಳದ ಯಜಮಾನರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಬಾರಿ ಬಡಗುತಿಟ್ಟು ಮೇಳದ ಯಜಮಾನರಿಗೆ  ಪ್ರಶಸ್ತಿ ನೀಡಿದರೆ, ಮುಂದಿನ ವರ್ಷ ತೆಂಕುತಿಟ್ಟು ಮೇಳದ ಯಜಮಾನರಿಗೆ ಪ್ರಶಸ್ತಿ ನೀಡಲಾಗುವುದು. ಕಲಾವಿದರು ಬೆಳೆಯಲು ಮೇಳದ ಯಜಮಾನರೂ ಕಾರಣ  ಎಂದರು.

ಯಕ್ಷಗಾನ ಕೇಂದ್ರದ ಸಲಹಾಸಮಿತಿ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಮಾತನಾಡಿ,  ಇಂದು ಯಕ್ಷಗಾನ ನಡೆಸುವುದು ಕಷ್ಟದ ಕೆಲಸ. ಡೇರೆ ಮೇಳಗಳ ಉಳಿವು ಪ್ರೇಕ್ಷಕರ ಕೈಯಲ್ಲಿದೆ. ಯಕ್ಷಗಾನ ಮೇಳಗಳ ಯಜಮಾನರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಉತ್ತಮ ಕಾರ್ಯ ಎಂದರು. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ ಜಿ.ಶಂಕರ್ ಮಾತನಾಡಿ ಕಲಾವಿದರು ಅಪಾರ್ಥ ಸಂಭಾಷಣೆ ಮಾಡಬಾರದು. ತೆಂಕುತಿಟ್ಟಿನ ಮೇಳದ ಯಜಮಾನರನ್ನೂ ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದರು. ವೇದಿಕೆಯಲ್ಲಿ ಉಜ್ವಲ ಡೆವಲಪರ್ಸಿನ ಎಂ.ಡಿ ಪುರುಷೋತ್ತಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಾಗರಾಜ ಶಂಕರನಾರಾಯಣ ಗಣಪತಿ ಸ್ತುತಿಯೊಂದಿಗೆ ಪ್ರಾರ್ಥಿಸಿದರು. ಶ್ರೀ ಭುವನ ಪ್ರಸಾದ್ ಹೆಗ್ಡೆ ಪ್ರಶಸ್ತಿ ಪತ್ರ ವಾಚಿಸಿದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.  ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಶಿವಕುಮಾರ್ ಅಳಗೋಡು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಒಗ್ಗೂಡುವಿಕೆಯಲ್ಲಿ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನಗೊಂಡಿತು.

Wednesday, August 12, 2026

ನಾಡೋಜ ಶ್ರೀ ಕೆ.ಪಿ ರಾವ್ ಅವರಿಗೆ ಡಾ. ಯು.ಪಿ ಉಪಾಧ್ಯಾಯ-ಡಾ. ಸುಶೀಲಾ ಉಪಾಧ್ಯಾಯ ಪ್ರಶಸ್ತಿ

 

ಭಾರತೀಯ ಭಾಷಾ ಗಣಕ ಪಿತಾಮಹ ನಾಡೋಜ ಶ್ರೀ ಕೆ.ಪಿ ರಾವ್ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಕೊಡಮಾಡುವ ಡಾ. ಯು.ಪಿ ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಹುಭಾಷಾ ವಿದ್ವಾಂಸರು, ಹಾಗೂ ತುಳುನಿಘಂಟು ರಚನೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಡಾ. ಯು.ಪಿ ಉಪಾಧ್ಯಾಯ ಮತ್ತು ಡಾ.ಸುಶೀಲಾ ಪಿ. ಉಪಾಧ್ಯಾಯ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ರೂ. ಹತ್ತುಸಾವಿರ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಕಾರ್ಯಕ್ರಮವು ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಶ್ರೀ ಕೆ.ಪಿ ರಾವ್ ಅವರು ೧೯೪೦ರ ಫೆಬ್ರವರಿ ೨೯ರಂದು ಮಂಗಳೂರು ಸಮೀಪದ ಕಿನ್ನಿಕಂಬಳದಲ್ಲಿ ಜನಿಸಿದರು. ೧೯೫೯ರಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದರು. ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ (ಖಿIಈಖ)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರಾಗಿ ವೃತ್ತಿಜೀವನ ಆರಂಭಿಸಿದ ಅವರು, ೧೯೭೦ರ ದಶಕದಲ್ಲಿ ಟಾಟಾ ಪ್ರೆಸ್‌ಗೆ ಸೇರ್ಪಡೆಯಾದ ನಂತರ ಅಕ್ಷರ, ಮುದ್ರಣ ಮತ್ತು ಭಾಷಾ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದರು. ಬಳಿಕ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ಎಕ್ಸ್ಪ್ರೆಸ್ ಮತ್ತು ಅಡೋಬ್ ಸಿಸ್ಟಂಸ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಸಲಹೆಗಾರರಾಗಿ ಹಾಗೂ ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಭಾರತೀಯ ಭಾಷೆಗಳ ಗಣಕೀಕರಣದಲ್ಲಿ ಶ್ರೀ ಕೆ. ಪಿ. ರಾವ್ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಉಚ್ಚಾರಣಾತ್ಮಕ ತರ್ಕವನ್ನು ಆಧರಿಸಿ ಕೀಲಿಮಣೆ ವಿನ್ಯಾಸ ರೂಪಿಸುವ ಮೂಲಕ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಸುಲಭವಾಗಿ ಬಳಸಲು ಸಹಕಾರಿಯಾದರು. ಕನ್ನಡ ಕೀಲಿಮಣೆ ವಿನ್ಯಾಸವನ್ನು ಅಭಿವೃದ್ಧಿಪಡಿಸಿ, ‘ಸೇಡಿಯಾಪು’ ಕನ್ನಡ ಪದಸಂಸ್ಕಾರಕ ತಂತ್ರಾಂಶವನ್ನು ರಚಿಸಿ ಮುಕ್ತ ಬಳಕೆಗೆ ನೀಡಿದರು. ಅವರ ಪ್ರಮುಖ ಕೃತಿ ‘ವರ್ಣಕ’. ಅವರ ಕನ್ನಡ ಕೀಲಿಮಣೆ ವಿನ್ಯಾಸಕ್ಕೆ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವೆಂಬ ಮಾನ್ಯತೆ ದೊರೆತಿದೆ. ತುಳು ಅಕಾಡೆಮಿ ಸೇರಿದಂತೆ ಹಲವು ಸಂಸ್ಥೆಗಳು ಅವರನ್ನು ಗೌರವಿಸಿದ್ದು, ೨೦೦೯ರ ಆಳ್ವಾಸ್ ನುಡಿಸಿರಿ ಸನ್ಮಾನ, ೨೦೧೩ರ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ೨೦೨೧ರ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಸಂದಿವೆ. ಅವರ ಜೀವನ ಮತ್ತು ಸಾಧನೆಗಳನ್ನು ಕುರಿತು ‘ಕಂಪ್ಯೂಟರ್, ಕನ್ನಡ, ಕೆ. ಪಿ. ರಾವ್’ (೨೦೧೩), ‘ಭಾರತೀಯ ಭಾಷಾ ಗಣಕ ಪಿತಾಮಹ ನಾಡೋಜ ಕೆ. ಪಿ. ರಾವ್’ (೨೦೨೦) ಮತ್ತು ‘ನಾಡೋಜ ಕೆ. ಪಿ. ರಾಯರ ನಾಡಿ, ನಡೆ, ನುಡಿ’ (೨೦೨೦) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ.


ರಂಗನಾಥ ದಿನಾಚರಣೆ ಕಾರ್ಯಕ್ರಮ (12.08.2026)


 



ನವಭಾರತದ ಗ್ರಂಥಾಲಯದ ಪರಿಕಲ್ಪನೆಗೆ ಹೊಸದಿಕ್ಕನ್ನು ಕಲ್ಪಿಸಿಕೊಟ್ಟ ಕೀರ್ತಿ ಡಾ. ಎಸ್. ಆರ್. ರಂಗನಾಥನ್ ಅವರಿಗೆ ಸಲ್ಲುತ್ತದೆ.  ಅವರ ಅದಮ್ಯವಾದ ಪುಸ್ತಕ ಪ್ರೀತಿ ಅವರನ್ನು (ಭಾರತದ ಗ್ರಂಥಾಲಯ ವಿಜ್ಞಾನ) ಗ್ರಂಥಾಲಯ ವಿಜ್ಞಾನದ ಪಿತಾಮಹನನ್ನಾಗಿ ರೂಪಿಸಿದೆ. ಅವರು ಅಂದು ರೂಪಿಸಿದ ವ್ಯವಸ್ಥೆಯಿಂದಾಗಿ ಶಾಲಾಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಗ್ರಂಥಾಲಯ ಆಧುನಿಕ ವ್ಯವಸ್ಥೆಯೊಂದಿಗೆ ಪರಿವರ್ತನೆಗೊಂಡಿದೆ ಎಂಬುದಾಗಿ ಎಂ.ಜಿ.ಎಂ. ಕಾಲೇಜಿನ ಗ್ರಂಥಪಾಲಕರಾದ ಶ್ರೀ ಕಿಶೋರ್ ಕುಮಾರ್ ಹೇಳಿದರು. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಆಗಸ್ಟ್ ೧೨, ೨೦೨೬ರಂದು ಹಮ್ಮಿಕೊಳ್ಳಲಾದ ರಂಗನಾಥನ್ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  ಡಾ. ಎಸ್.ಆರ್. ರಂಗನಾಥನ್ ಅವರು ಅಗೋಸ್ಟ್ ೧೨, ೧೮೯೨ರಲ್ಲಿ ಜನಿಸಿದರು.  ಅವರ ಕೊಡುಗೆಗಳೆಂದರೆ ಗ್ರಂಥಾಲಯದ ಪಂಚಸೂತ್ರಗಳು ಮತ್ತು ಕೊಲೊನ್ ವರ್ಗೀಕರಣ.  ಗ್ರಂಥಾಲಯದ ಬಗ್ಗೆ ಮಾಡಿದ ಸಾಧನೆ, ನೀಡಿದ ಕೊಡುಗೆ ಹಾಗೂ ಅವರ ಸೇವೆಗಾಗಿ ಅವರನ್ನು ಗ್ರಂಥಾಲಯದ ಪಿತಾಮಹ ಎಂದು ಕರೆಯುತ್ತಾರೆ.  ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಆಗಿ ಆಚರಿಸಲಾಗುತ್ತದೆ ಎಂದರು. ಎಂ.ಜಿ.ಎಂ ಕಾಲೇಜಿನ ಗಾಂಧಿಯನ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಶ್ರೀ ವಿನಿತ್ ರಾವ್, ಆರ್.ಆರ್.ಸಿ ಸಹಸಂಶೋಧಕ ಡಾ. ಎಸ್.ಆರ್. ಅರುಣ್ ಕುಮಾರ್ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.