Wednesday, April 8, 2026
ಯಕ್ಷಗಾನ ಕೇಂದ್ರ ಇಂದ್ರಾಳಿ, ಉಡುಪಿ - ಬೇಸಿಗೆ ಶಿಬಿರ ದಿನಾಂಕ: 16.04.2026 - 25.04.2026
ಬೇಸಿಗೆ ಶಿಬಿರ
ಯಕ್ಷಗಾನ ಕೇಂದ್ರ ಇಂದ್ರಾಳಿ, ಮಾಹೆ, ಇವರ ಆಶ್ರಯದಲ್ಲಿ ಯಕ್ಷಗಾನ ಹೆಜ್ಜೆಗಾರಿಕೆ, ವೇಷಭೂಷಣ ಮತ್ತು ಬಣ್ಣಗಾರಿಕೆ ಶಿಬಿರವನ್ನು ಎಪ್ರಿಲ್ ೧೬, ೨೦೨೬ ರಿಂದ ಎಪ್ರಿಲ್ ೨೫, ೨೦೨೬ರವರೆಗೆ ಬೆಳಿಗ್ಗೆ ೯.೩೦ರಿಂದ ಮಧ್ಯಾಹ್ನ ೧೨.೩೦ರವರೆಗೆ ನಡೆಸಲಾಗುತ್ತದೆ. ಶಿಬಿರದಲ್ಲಿ ೧೫ ವರ್ಷಕ್ಕೆ ಮೇಲ್ಪಟ್ಟ ಯಕ್ಷಗಾನ ಆಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಬಹುದೆಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ/ ಹೆಸರು ನೋಂದಣಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆಮಾಡಬಹುದು. ೯೯೦೧೧೯೦೩೯೨/ ೯೯೦೦೯೦೭೭೦೨/೯೯೪೫೨೪೫೧೪೪
Wednesday, April 1, 2026
ಇನಾಂದಾರ್ ಪ್ರಶಸ್ತಿ’ಗೆ ಡಾ. ಗೀತಾ ವಸಂತ ಅವರ ‘ತೆರೆದಷ್ಟೂ ಅರಿವು’ ವಿಮರ್ಶಾ ಕೃತಿ ಆಯ್ಕೆ
ಖ್ಯಾತ ವಿಮರ್ಶಕ ಪ್ರೊ. ವಿ.ಎಂ ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಪ್ರಸಿದ್ಧ ಲೇಖಕಿ, ವಿಮರ್ಶಕಿ ಡಾ. ಗೀತಾ ವಸಂತ ಅವರ‘ತೆರೆದಷ್ಟೂ ಅರಿವು’ ವಿಮರ್ಶಾ ಕೃತಿಯು ೨೦೨೫ರ ಸಾಲಿಗೆ ಆಯ್ಕೆಯಾಗಿದೆಯೆಂದು ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯನ್ನು ದಿನಾಂಕ: ೧೫.೦೪.೨೦೨೬ರಂದು ನಡೆಯುವ ಎಂ.ಜಿ.ಎಂ ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುತ್ತದೆ.
ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಗೀತಾ ವಸಂತ ಅವರು ಮೂಲತ: ಉತ್ತರ ಕನ್ನಡದ ಕಾಡನಡುವಿನ ಕಾಟೀಮನೆಯವರು. ಶಿರಸಿಯಲ್ಲಿ ಪದವಿ ಹಾಗೂ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ‘ಸ್ವಾತಂತ್ರ್ಯೋತ್ತರ ಕನ್ನಡ ಮಹಿಳಾ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಹಾಗೂ ‘ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪ ‘ ಪ್ರಬಂಧಕ್ಕೆ ಡಿ.ಲಿಟ್ ಪದವಿ ಪಡೆದಿದ್ದಾರೆ.
ಕಾವ್ಯ, ಸಣ್ಣಕಥೆ, ವಿಮರ್ಶೆ, ಮಹಿಳಾ ಅಧ್ಯಯನ, ಸಂಸ್ಕöÈತಿ ಅಧ್ಯಯನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ‘ಹೊಸಿಲಾಚೆ ಹೊಸಹೆಜ್ಜೆ’ ಮೊದಲ ಕವನ ಸಂಕಲನ. ‘ಚೌಕಟ್ಟಿನಾಚೆಯವರು’ ಕಥಾಸಂಕಲನ, ‘ಬೆಳಕಿನ ಬೀಜ’, ‘ಹೊಸ ದಿಗಂತ ಹೊಸದಾರಿ’, ‘ಬೀಜದೊಳಗಣ ವೃಕ್ಷ’, ‘ಅಕ್ಷರ ದಾಹ’, ‘ತೆರೆದಷ್ಟೂ ಅರಿವು’ ಮುಂತಾದವು ಅವರ ವಿಮರ್ಶಾ ಕೃತಿಗಳು. ಬೇಂದ್ರೆ ಕಾವ್ಯದ ಅವಧೂತ ಪ್ರಜ್ಞೆ, ತುಮಕೂರು ಜಿಲ್ಲೆಯ ಮಹಿಳಾ ಲೇಖಲೋಕ, ಕರ್ನಾಟಕದ ಸಂಸ್ಕöÈತಿ ಹಾಗೂ ಸಾಹಿತ್ಯದ ಮೇಲೆ ಅವಧೂತ ಪರಂಪರೆಗಳ ಪ್ರಭಾವ ಇವು ಅವರ ಸಂಶೋಧನೆಗಳು. ‘ಅವಳ ಅರಿವು’, ‘ಕನ್ನಡಕ್ಕೊಬ್ಬರೇ ಗೋಕಾಕರು’, ‘ಕಂಡವರಿಗಷ್ಟೆ’, ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಲಕ್ಷಿತ ಲೋಕದ ಸಂಕಥನ’ ಇವು ಸಂಪಾದಿತ ಕೃತಿಗಳು.
ಸೃಜನಶೀಲ ಬರವಣಿಗೆಯ ಜತೆ ವಿಮರ್ಶೆ, ಸ್ತ್ರೀ ಸಂವೇದನೆ, ಸಂಸ್ಕöÈತಿ ಚಿಂತನೆಗಳೂ ಇವರ ಆಸಕ್ತಿಯ ಕ್ಷೇತ್ರಗಳು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅನೇಕ ವಿಚಾರ ಸಂಕಿರಣ, ಸಮ್ಮೇಳನ ಹಾಗೂ ಕಮ್ಮಟಗಳನ್ನು ಆಯೋಜಿಸಿದ್ದಾರೆ. ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದಾರೆ.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಡಾ ಪಾಟೀಲ ಪುಟ್ಟಪ್ಪ ಕಥಾ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಸಾಹಿತ್ಯ ಪುರಸ್ಕಾರ, ಬ್ಯಾಡಗಿ ಸಂಕಮ್ಮ ಕಾವ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
Thursday, March 26, 2026
ಮಣಿಪಾಲ ವಿ.ವಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ (25.03.2026)
ದಿನಾಂಕ: ೨೫.೦೩.೨೦೨೬ರಂದು ಮಣಿಪಾಲ ವಿ.ವಿಯಲ್ಲಿ ನಡೆದ ಮಣಿಪಾಲ ಗ್ಲೋಬಲ್ ಎಸ್.ಡಿ.ಜಿ ಕನ್ವರ್ಜೆನ್ಸ್ ವಿಚಾರಸಂಕಿರಣದಲ್ಲಿ ಯಕ್ಷಗಾನ ಕೇಂದ್ರ, ಇಂದ್ರಾಳಿ (ಮಾಹೆ)ಯ ಯಕ್ಷಗಾನ ಸರ್ಟಿಫಿಕೇಟ್ ಕೋರ್ಸಿನ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ ಹಾಗೂ ಯಕ್ಷಗಾನ ಕೇಂದ್ರದ ವಿದ್ಯರ್ಥಿಗಳಿಂದ ‘ಅಭಿಮನ್ಯು ಕಾಳಗ’ ಎಂಬ ಯಕ್ಷಗಾನ ಕಾರ್ಯಕ್ರಮ ಜರುಗಿತು.
Tuesday, March 24, 2026
ದಿನಾಂಕ: ೨೩.೦೩.೨೦೨೬ರಂದು ನಡೆದ ರಾಷ್ಟ್ರಕವಿ ಗೋವಿಂದ ಪೈ ಸಂಸ್ಮರಣೆ ಕಾರ್ಯಕ್ರಮ
ಅಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ಸರಳ ಜೀವನ ನಡೆಸಿದ ರಾಷ್ಟ್ರಕವಿ ಗೋವಿಂದ ಪೈ ಕವಿ, ಸಂಶೋಧಕ, ಶ್ರೇಷ್ಠ ವಿಮರ್ಶಕನಾಗಿ ಸೈ ಎನಿಸಿದ ಮೇರು ವ್ಯಕ್ತಿತ್ವ ಎಂದು ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಬಿ.ಪಿ ಸಂಪತ್ ಕುಮಾರ್ ಹೇಳಿದರು. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಸಹಯೋಗದಲ್ಲಿ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕದಲ್ಲಿ ಹಮ್ಮಿಕೊಂಡಿರುವ ಗೋವಿಂದ ಪೈ ೧೪೩ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ‘ಗೋವಿಂದ ಪೈ ವ್ಯಕ್ತಿ-ಶಕ್ತಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.
ಪೈಗಳು ಕನ್ನಡದ ಬಗ್ಗೆ ಅಪ್ಪಟ ಪ್ರೀತಿ ಹೊಂದಿದ್ದರು. ೮೦ ವರ್ಷಗಳ ತುಂಬು ಜೀವನ ನಡೆಸಿದ್ದ ಅವರು ಸರಳ ವ್ಯಕ್ತಿತ್ವದ ಜತೆ ವಾರ್ಧಕ್ಯದಲ್ಲಿ ಸನ್ಯಾಸಿಯಂತೆ ಜೀವನ ನಡೆಸಿದ್ದರು. ಪ್ರಶಸ್ತಿ ಗೌರವದಲ್ಲಿ ನಿರಾಸಕ್ತಿ ಹೊಂದಿದ್ದ ಅವರು ಅಧ್ಯಯನದಲ್ಲಿ ತುಂಬಾ ಚತುರರು. ಕೊಂಕಣಿ ಮಾತೃಭಾಷೆಯಾಗಿದ್ದರೂ ೨೨ ಭಾಷೆಗಳಲ್ಲಿ ಓದಿ ಬರೆಯುವ ಜ್ಞಾನವಿತ್ತು ಎಂದರು.
ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ ಸಂಶೋಧನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಗೋವಿಂದ ಪೈ ಅವರು ದೇಶಭಿಮಾನದ ಜತೆ ಅಸ್ಪöÈಶ್ಯತಾ ನಿವಾರಣೆಗೆ ಶ್ರಮಿಸಿ, ಸಾಹಿತ್ಯದ ಮೂಲಕ ಜನಜಾಗೃತಿ ಗೊಳಿಸಿದ್ದಾರೆ. ಕನ್ನಡ ಭಾಷೆ ಸಾಹಿತ್ಯಕ್ಕೆ ಜೀವನ ಸಮರ್ಪಿಸಿಕೊಂಡ ಕವಿ ಎಂದು ವಿಶ್ಲೇಷಿಸಿದರು.
ಕು. ಶ್ರಾವ್ಯ ಬಾಸ್ರಿ ಅವರು ಗೋವಿಂದ ಪೈಗಳ ಕಾವ್ಯದಿಂದ ಆಯ್ದ ಸಾಲುಗಳ ಕಾವ್ಯಪ್ರಸ್ತುತಿ ನಡೆಸಿಕೊಟ್ಟರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆ ಗೈದರು. ಆರ್.ಆರ್.ಸಿ ಸಹ ಸಂಶೋಧಕರಾದ ಡಾ. ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Friday, March 13, 2026
Tuesday, March 10, 2026
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ತೆಂಕನಿಡಿಯೂರು ಪದವಿ ಕಾಲೇಜಿನ ವಿದ್ಯಾರ್ಥಿಗಳ ಭೇಟಿ
ದಿನಾಂಕ: 10.03.2026ರಂದು ತೆಂಕನಿಡಿಯೂರು ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ಇಲ್ಲಿಯ ಗ್ರಂಥಾಲಯ, ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಆರ್.ಆರ್.ಸಿ.ಯ ದಾಖಲೀಕರಣ ಮುಂತಾದ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಆಡಳಿತಾಧಿಕಾರಿಗಳಾದ ಡಾ. ಬಿ. ಜಗದೀಶ್ ಶೆಟ್ಟಿ ಹಾಗೂ ಆರ್.ಆರ್.ಸಿಯ ಸಹ ಸಂಶೋಧಕರಾದ ಡಾ. ಅರುಣ್ ಕುಮಾರ್ ಎಸ್.ಆರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಉಪನ್ಯಾಸಕರಾದ ಡಾ. ಮಹೇಶ್ ಕೆ.ಇ. ಹಾಗೂ ಡಾ. ಬಾಬು ಜೊತೆಗಿದ್ದರು.






