Wednesday, September 16, 2026

ದಿನಾಂಕ:12.09.2026ರಂದು ನಡೆದ ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿ ಹಾಗೂ ಡಾ. ಯು.ಪಿ ಉಪಾಧ್ಯಾಯ-ಡಾ. ಸುಶೀಲಾ ಪಿ, ಉಪಾಧ್ಯಾಯ ಪ್ರಶಸ್ತಿ ಕಾರ್ಯಕ್ರಮ

 











ಪರಂಪರೆಯ ಅನುಭವದಿಂದ ದೇಶ ಕಟ್ಟಲು ಸಾಧ್ಯ - ಪ್ರೊ. ಬಿ. ವಿವೇಕ ರೈ

ಪರಂಪರೆಯ ಅರಿವು, ಅನುಭವ ತಿಳುವಳಿಕೆಯನ್ನು ಬಿಟ್ಟು ಸಮಾಜ, ದೇಶವನ್ನು ಕಟ್ಟಲಾಗದು ಎಂದು  ಡಾ ಬಿ. ವಿವೇಕ ರೈ ಹೇಳಿದರು. ಅವರು ದಿನಾಂಕ ೧೨.೦೯.೨೦೨೬ರಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಕೊಡಮಾಡುವ ಶ್ರೀಮತಿ ಆಶಾ ಕುತ್ಯಾರ್ ಹಾಗೂ ಅಶೋಕ್ ಕುತ್ಯಾರ್ ಪ್ರಾಯೋಜಿತ ಪ್ರೊ. ಕು.ಶಿ ಹರಿದಾಸ ಭಟ್ಟರ ಸ್ಮರಣಾರ್ಥ ನೀಡಲಾಗುವ ಪ್ರೊ. ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿ ಹಾಗೂ ಡಾ. ಯು. ಪಿ ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಕೋಟಿ, ಟ್ರೆಲಿಯನ್ ಆರ್ಥಿಕತೆಯಿದ್ದರೂ ಭಾಷೆ, ಸಾಹಿತ್ಯ, ಸಂಸ್ಕೃತಿ ತಿಳಿಯದಿದ್ದರೆ ಏನು ಪ್ರಯೋಜನ?ಹಣದಿಂದ ಎಲ್ಲವನ್ನೂ ಕಟ್ಟಲಾಗದು. ವಿದ್ವತ್ ಪರಂಪರೆ ಕ್ಷೀಣಿಸುತ್ತಿದ್ದು ಹೊಸ ಪರಂಪರೆಯನ್ನು ಜೋಡಿಸಬೇಕು. ಮನೋಧರ್ಮವಿಲ್ಲದೆ ಸಂಶೋಧನೆ ಸಾಧ್ಯವಾಗದು ಸಂಸ್ಕೃತಿ ಒಳಹೋಗಿ ಸಂಶೋಧನೆ, ಅಧ್ಯಯನ ಮುಂದುವರಿಯಬೇಕು ಎಂದರು.

ದೇಶದ ಜೆನ್ಜಿ ಹಿಂದಿನ ಪರಂಪರೆ ಅಳವಡಿಸಿ ಮುಂದುವರಿಸುವ ಆಸಕ್ತಿ ವಹಿಸಬೇಕಿದೆ. ವಿದ್ಯಾರ್ಥಿಗಳು ಹೆಚ್ಚು ಓದುವ ಮೂಲಕ ಜ್ಞಾನವೃದ್ಧಿಸಿಕೊಂಡು ಹೊಸತನ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಜೀವನದಲ್ಲಿ ಪ್ರತಿದಿನ ಹೊಸ ಹೆಜ್ಜೆಗಳನ್ನು ಇಡಬೇಕು. ಇಂದಿನ ಕಾಲಘಟ್ಟದಲ್ಲಿ ಹೊಸ ಪೀಳಿಗೆಗೆ ಪ್ರೊ. ಕೆ.ಪಿ ರಾವ್  ಹಾಗೂ ಕನರಾಡಿ ವಾದಿರಾಜ ಭಟ್ಟರು ಮಾದರಿ ಮತ್ತು ಪ್ರೇರಕರಾಗಿದ್ದಾರೆ ಎಂದರು.

೨೦೨೬ನೇ ಸಾಲಿನ ಕು.ಶಿ ಜಾನಪದ ಪ್ರಶಸ್ತಿಯನ್ನು  ಹಿರಿಯ ಜಾನಪದ ತಜ್ಞ ಡಾ. ಕನರಾಡಿ ವಾದಿರಾಜ ಭಟ್ ಅವರಿಗೆ, ೨೦೨೫ನೇ ಸಾಲಿನ ಡಾ. ಯು.ಪಿ ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿಯನ್ನು ಗಣಕತಂತ್ರಜ್ಞ ಪ್ರೊ. ಕೆ.ಪಿ ರಾವ್ ಅವರಿಗೂ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃ ಡಾ. ಕನರಾಡಿ ವಾದಿರಾಜ ಭಟ್ ಮಾತನಾಡಿ ’ನನಗೆ ಜಾನಪದ ವಿಷಯವಾಗಿ ಬೆಳಕು ತೋರಿದವರು ಪ್ರೊ.ಬಿ. ವಿವೇಕ ರೈ ಅವರು. ನನ್ನ ಎಲ್ಲಾ ಜಾನಪದ ಗುರುಗಳು ಮತ್ತು ವಿದ್ಯಾರ್ಥಿಗಳ ಪರವಾಗಿ  ಪ್ರಶಸ್ತಿ ಸ್ವೀಕರಿಸಿದ್ದೇನೆ. ಮುಂದೆ ಜಾನಪದ ಕೃತಿ ಪ್ರಕಟಿಸುವ ವೇಳೆ ಪ್ರಶಸ್ತಿ ಹಣವನ್ನು ಕು.ಶಿ ಅವರ ಹೆಸರಿನಲ್ಲಿ ಸಮರ್ಪಿಸುತ್ತೇನೆ. ಹಳ್ಳಿಯ ಜನಪದರ ವಿದ್ವತ್ತು ಗುರುತಿಸುವ ಪ್ರವೃತ್ತಿ ಹೆಚ್ಚಬೇಕು ಎಂದರು.

 ಪ್ರೊ. ಕೆ.ಪಿ ರಾವ್ ಮಾತನಾಡಿ, ಭಾಷೆಯ ವಿನ್ಯಾಸ ಮತ್ತು ವಿಸ್ತರಣೆಗಾಗಿ  ಪ್ರಯೋಗ ಮಾಡಬೇಕಾಗಿದೆ. ಉತ್ತಮ ಗುರುಗಳನ್ನು ಗುರುತಿಸುವವರು ಬೇಕು. ಜ್ಞಾನ ಎಲ್ಲೆಡೆ ಹರಡುತ್ತಿರಬೇಕು. ಜತೆಗೆ ಅದನ್ನು ತಿಳಿಯುವ ಮನಸ್ಸು ಬೇಕು ಎಂದರು.

ಹಿರಿಯ  ವಿದ್ವಾಂಸ ರಾಘವ ನಂಬಿಯಾರ್  ಪ್ರೊ. ಕೆ.ಪಿ ರಾವ್ ಅವರ ಕುರಿತು ಹಾಗೂ ಡಾ. ಚಂದ್ರಾವತಿ  ಡಾ. ಕನರಾಡಿ ವಾದಿರಾಜ ಭಟ್ ಅವರ ಕುರಿತಾಗಿ ಅಭಿನಂದನ ಮಾತುಗಳನ್ನಾಡಿದರುಮುಖ್ಯ ಅತಿಥಿಯಾಗಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಜಿ.ಪೈ ಕಾರ್ಯಕ್ರಮಕ್ಕೆ ಶುಭ ಹಾರಯಿಸಿದರುಕು.ಶಿ ಹರಿದಾಸ ಭಟ್ ಹಾಗೂ ಉಪಾಧ್ಯಾಯ ದಂಪತಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಯಕ್ಷಗಾನ ಕೇಂದ್ರದ ಗುರುಗಳಾದ ಶ್ರೀ ಉಮೇಶ್ ಸುವರ್ಣ ಯಕ್ಷಗಾನ ಪದ್ಯ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರುರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರುಆರ್.ಆರ್.ಸಿ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  

Monday, August 31, 2026

ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಕಾರ್ಯಕ್ರಮ (ದಿನಾಂಕ: 29.08.2026)

 







ಯುದ್ಧ ವಿರೋಧಿ ನೀತಿಯು ಕೃತಿಯ ಒಟ್ಟು ಆಶಯವಾಗಿದೆ. ಯುದ್ಧ ಸಂದರ್ಭದಲ್ಲಿ ಅರ್ಥ ವ್ಯವಸ್ಥೆ ಮಾರುಕಟ್ಟೆ ನೀತಿ, ನಿರೂಪಕರು ಸಮಾಜದ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಾರೆ ಎಂಬುದನ್ನು ಬಿಂಬಿಸುತ್ತದೆ. ಶಾಲೆ, ಆಸ್ಪತ್ರೆಗಳ ಮೇಲೆ ದಾಳಿ ಮಾಡಬಾರದೆನ್ನುವ ನೀತಿ ನಿಯಮಗಳಿದ್ದರೂ ಯುದ್ಧ ಆರಂಭವಾದರೆ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಇದು ಮಹಾಭಾರತ ಕಾಲದಿಂದಲೂ ನಡೆದು ಬಂದಿದೆ ಎಂದು ಲೇಖಕಿ ಡಾ. ಮಾಧವಿ ಭಂಡಾರಿ ವಿಷಾದಿಸಿದ್ದಾರೆ.

ಅವರು ದಿನಾಂಕ ೨೯.೦೮.೨೦೨೬, ಶನಿವಾರದಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್  ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ  ಸಮಿತಿ ಸಹಯೋಗದಲ್ಲಿ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ ಸಭಾಂಗಣದಲ್ಲಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಆಯ್ಕೆಯಾದ  ಗೋಡೆಗೆ ನೇತು ಬಿದ್ದ ಭೂಪಟ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.  ಲಕ್ಷ್ಮಣ ವಿ. ಅವರ ಕೃತಿಯಲ್ಲಿನ ಕವಿತೆಗಳು ಭ್ರಮೆ ಮತ್ತು ವಾಸ್ತವದ ನಡುವೆ ಜೀಕಾಡುತ್ತವೆ. ಆದರೂ ವಾಸ್ತವವೇ ಕವಿತೆಗಳ ಜೀವಾಳವಾಗಿದೆ ಎಂದರು.   

ಬೆಳಗಾವಿಯ ಡಾ. ಲಕ್ಷ್ಮಣ ವಿ. ಅವರು ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶಿಫಾರಸುಅಡ್ಡ ದಾರಿ ಹಿಡಿದು ಪ್ರಶಸ್ತಿಗಳ ಘನತೆಹಾಳು ಮಾಡಬಾರದು. ಕಡೆಂಗೋಡ್ಲು ಶಂಕರ ಭಟ್ಟರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಭಾಜನವಾಗಿರುವುದು ನನ್ನ ಕಾವ್ಯಕ್ಕೆ ಸಂದ ಗೌರವ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂ.ಜಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಜಿ. ಪೈ ಮಾತನಾಡಿ ಸಾಹಿತ್ಯ ಬರಹಗಳು ಸಮಾಜಪರ ಧ್ವನಿಯಾಗಬೇಕು. ಸಾಮಾಜಿಕ ಜಾಲತಾಣ, ಒತ್ತಡ, ತಂತ್ರಜ್ಞಾನ, ವೇಗದ ಬದುಕಿನ ನಡುವೆ ಸಾಹಿತ್ಯದ ಅಗತ್ಯ ಹೆಚ್ಚಾಗಿದೆ. ಹಿರಿಯ ಸಾಹಿತಿ, ಲೇಖಕರ ಸಾಹಿತ್ಯದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಸಮಾಜ ಸಂವೇದನಾಶೀಲವಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರವಿರಾಜ್ ಶೆಟ್ಟಿ ಅವರು ಮಾತನಾಡಿ, ಕಡೆಂಗೋಡ್ಲು ಶಂಕರ ಭಟ್ಟರು ವಾಗ್ಮಯ ತಪಸ್ವಿಯಾಗಿದ್ದು, ಅವರ ಕಾವ್ಯವು ವಾಙ್ಮಯ ತಪಸ್ಸಾಗಿದೆ ಎಂದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಆರ್.ಸಿಯ ಸಹಾಯಕ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿನಿ ಕು. ಚೈತನ್ಯಾ ಎನ್ ಪ್ರಾರ್ಥಿಸಿದರು. ಕಡೆಂಗೋಡ್ಲು ಶಂಕರ ಭಟ್ಟರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.