Monday, June 22, 2026

ಯಕ್ಷಗಾನ ದಾಖಲೀಕರಣದ ಕರೆಯೋಲೆ (ದಿನಾಂಕ: ೦೫.೦೭.೨೦೨೬ ಭಾನುವಾರ, ಬೆಳಿಗ್ಗೆ ೯.೩೦ - ೧೨.೩೦)

 



ಡಾ.ಟಿ.ಎನ್. ನಾಗರತ್ನ ಅವರಿಗೆ ೨೦೨೬ರ ಸೇಡಿಯಾಪು ಪ್ರಶಸ್ತಿ

 

ಕನ್ನಡ ಭಾಷೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಹಿರಿಯ ಸಾಹಿತಿ, ಕನ್ನಡ ಭಾಷಾತಜ್ಞೆ, ಅನುವಾದಕಿ, ಸಂಶೋಧಕಿ ಡಾ.ಟಿ.ಎನ್. ನಾಗರತ್ನ ಅವರು ೨೦೨೬ನೇ ಸಾಲಿನ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಶಸ್ತಿಯು ರೂ ೧೦೦೦೦/- (ಹತ್ತು ಸಾವಿರ) ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಕಾರ್ಯಕ್ರಮವು ದಿನಾಂಕ: ೧೮.೦೭.೨೦೨೬ರಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. 

ಶಿವಮೊಗ್ಗ ನಗರ ನಿವಾಸಿಗಳಾದ ಶ್ರೀ ಟಿ.ನಾಗಶರ್ಮ ಮತ್ತು ಶ್ರೀಮತಿ ರಾಜಲಕ್ಷ್ಮೀಯವರ ಪುತ್ರಿ ಡಾ.ಟಿ.ಎನ್. ನಾಗರತ್ನ ಅವರು ಮೇ ೨೯, ೧೯೪೫ರಂದು ಜನಿಸಿದರು. ಶಿವಮೊಗ್ಗದಲ್ಲಿ ಬಿ.ಎ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಅದ್ವಿತೀಯರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಡಾಕ್ಟರೇಟ್ (ಪಿಎಚ್.ಡಿ.) ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ೧೯೭೦ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿ ಹಾಗೂ ಸಂಶೋಧನ ಸಹಾಯಕರಾಗಿ ವೃತ್ತಿಜೀವನ ಆರಂಭಿಸಿದರು. ಸುಮಾರು ೩೫ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ, ಹರಿದಾಸ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ೨೦೦೩ರಲ್ಲಿ ನಿವೃತ್ತರಾದರು. ನಂತರ ಇವರು ಕನಕದಾಸ ಅಧ್ಯಯನ ಸಂಶೋಧನಾ ಪೀಠದಲ್ಲಿ ಕನಕದಾಸರ ಕೃತಿಗಳ ಸಂಪಾದನೆ ಮತ್ತು ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರದ “ಸಮಗ್ರ ದಾಸಸಾಹಿತ್ಯ ಪ್ರಕಟಣ ಯೋಜನೆ”ಯಲ್ಲಿ ಕಾರ್ಯವಾಹಕ ಸಂಪಾದಕಿಯಾಗಿ, ‘ಪುರಂದರ ಪೀಠ’ದ ಸಲಹಾ ಸಮಿತಿಯ ಸದಸ್ಯರಾಗಿ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸದಸ್ಯೆ ಹಾಗೂ ಸಮಗ್ರ ಕನಕ ಸಾಹಿತ್ಯ ಅನುವಾದದ ಬೃಹದ್ಯೋಜನೆಯಲ್ಲಿ ಕನ್ನಡ ಭಾಷಾತಜ್ಞರಾಗಿ ನಿಯುಕ್ತರಾಗಿದ್ದರು.  ದಾಸಸಾಹಿತ್ಯಾಧ್ಯಯನ, ಪ್ರಸಾರ, ಬೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಬರೆದ ಅನೇಕ ಪುಸ್ತಕಗಳೂ, ನೂರಾರು ಲೇಖನಗಳೂ ಪ್ರಕಟವಾಗಿವೆ.  ‘ಹರಿದಾಸರ ಭಕ್ತಿ ಸ್ವರೂಪ’, ‘ಶ್ರೀ ಗೋಪಾಲದಾಸರ ಕೃತಿಗಳು’, ‘ಶ್ರೀ ವಾದಿರಾಜರ ಕೃತಿಗಳು’, ‘ಶ್ರೀ ಜಗನ್ನಾಥದಾಸರ ಕೃತಿಗಳು’, ‘ಶ್ರೀ ವ್ಯಾಸರಾಯರ ಕೃತಿಗಳು’ ‘ಹರಪನಹಳ್ಳಿ ಭೀಮವ್ವನ ಹಾಡುಗಳು,’ ‘ಶ್ರೀ ರಾಮದಾಸರ ಕೃತಿಗಳು’, ‘ಶ್ರೀ ಕನಕದಾಸರ ಕೀರ್ತನೆಗಳು’- ಇವು ಇವರ ಕೃತಿಗಳಲ್ಲಿ ಮುಖ್ಯವಾದವು. ಅನೇಕ ವಿಚಾರಸಂಕಿರಣಗಳು, ದಾಸಸಾಹಿತ್ಯ ಗೋಷ್ಠಿಗಳು, ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕನ್ನಡ ವಿಶ್ವವಿದ್ಯಾಲಯದ ರಾಷ್ಟ್ರೀಯ ಸಮ್ಮೇಳನದಲ್ಲಿ ‘ಗೌರವ ಸಂಮಾನ’, ‘ಹರಿದಾಸ ಸಾಹಿತ್ಯ ವಿದ್ವನ್ಮಣಿ’ ಬಿರುದು-  ಅಲ್ಲದೆ ‘ವಿಜಯವಿಠಲ’ ಪ್ರಶಸಿ,್ತ ‘ಹೊಯ್ಸಳ’ ಪ್ರಶಸ್ತಿ ‘ಮಧ್ವ-ಪುರಂದರ’ ಪ್ರಶಸ್ತಿ’ ೨೦೧೮ರಲ್ಲಿ ‘ಸಾಹಿತ್ಯ ಸರಸ್ವತಿ’, ೨೦೦೯ರಲ್ಲಿ ಕರ್ನಾಟಕ ಸರಕಾರದ ಪ್ರತಿಷ್ಠಿತ ‘ಕನಕ ಶ್ರೀ’ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ಇವರು ಸಂಪಾದಿಸಿದ ‘ಶ್ರೀ ಕನಕದಾಸರ ಕೀರ್ತನೆಗಳು’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ೨೦೧೪ನೇ ವರ್ಷದ ಅತ್ಯುತ್ತಮ ಸಂಪಾದಿತ ಕೃತಿಯೆಂದು ಪರಿಗಣಿಸಿ ಪುಸ್ತಕ ಬಹುಮಾನ ನೀಡಿ ಗೌರವಿಸಿದೆ. ಅಖಿಲಕರ್ನಾಟಕ ಹದಿನಾರನೆಯ ಹಸ್ತಪ್ರತಿ ಸಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದಿಂದ ೨೦೨೫ರ ಪ್ರತಿಷ್ಠಿತ ‘ಶಂಬಾ ಜೋಷಿ ಸಂಶೋಧನ’ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.

ದಿನಾಂಕ: ೨೦.೦೬.೨೦೨೬ರಂದು ನಡೆದ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಗಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

 

























ಪೊಳಲಿ ಶೀನಪ್ಪ ಹೆಗ್ಡೆಯವರ ಬದುಕು ಮತ್ತು ಬರಹಗಳು ಎಂದೂ ಮಾದರಿಯಾಗಿರುವಂತದ್ದು. ಸ್ವಾತಂತ್ರ ಪೂರ್ವದಿಂದಲೇ ಅವರು ತುಳುನಾಡಿನ ಕುರಿತು ಅನೇಕ ಸಂಶೋಧನೆ ನಡೆಸಿ ಕೃತಿಗಳನ್ನು ನೀಡಿದವರು. ಆ ಸಂದರ್ಭದಲ್ಲಿ ಅವರು ಅನೇಕ ಹೊಳಹುಗಳನ್ನು ನೀಡಿ ಮುಂದಿನ ಅಧ್ಯಯನಕಾರರಿಗೆ  ದಾರಿದೀಪವಾದರು ಎಂದು ಪ್ರೊ. ಬಿ. ಎ ವಿವೇಕ ರೈ ಹೇಳಿದರು. ಅವರು ದಿನಾಂಕ:೨೦.೦೬.೨೦೨೬ರಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್‌ಎಜುಕೇಶನ್, ಚೇಳ್ಯಾರು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಕೊಡಮಾಡುವ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್ ಹೆಗ್ಗಡೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  ಗದ್ಯರೂಪದಲ್ಲಿ ತುಳುನಾಡಿನ ಜನಪದ ಸಂಪತ್ತನ್ನು ಮುಖ್ಯವಾಗಿ ಪಾಡ್ದನದ ಕಥೆಗಳನ್ನು ಸಂಗ್ರಹಿಸಿ ಜಾನಪದ ಅದ್ಯಯನಕಾರರಿಗೆ ಮಾರ್ಗದರ್ಶಿ ಸೂತ್ರವನ್ನು ಹೆಣೆದರು. ಅವರಿಗೆ ತುಳುನಾಡಿನ ವ್ಯಾಪಕವಾದ ಸಂಸ್ಕೃತಿ, ಆಚಾರ ವಿಚಾರಗಳ ಕುರಿತು ಪರಿಚಯವಿತ್ತು. ಇಂದಿನ ದಿನಗಳಲ್ಲಿ ಓದು, ಸಂಶೋಧನೆಗಳು ದೂರ ಸರಿಯುತ್ತಿವೆ. ವಿಸ್ತಾರವಾದ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳಷ್ಟೇ ನಿಜ ಸತ್ಯದರ್ಶನ ಮಾಡಿಸಬಲ್ಲವು. ಆಳ ಅಧ್ಯಯನಗಳನ್ನು ಅಪೇಕ್ಷೆಪಡುವ ಇಂತಹ ಕ್ಷೇತ್ರಗಳು ಇಂದು ಬಡವಾಗುತ್ತಿರುವುದು ಖೇದನೀಯ ಎಂದರು.
 
ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ಲೇಖಕ, ಸಂಶೋಧಕರಾದ ಡಾ. ಬಿ. ಶಿವರಾಮ ಶೆಟ್ಟಿ ಅವರು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು. ಸಂಶೋಧನೆ ಎಂದರೆ ಹೊಸತನ್ನು ಹೇಳುವುದಲ್ಲ ಇಲ್ಲದ್ದನ್ನೂ ಹೇಳುವುದಲ್ಲ, ಬದಲು ಆಳವಾದ ಅಭ್ಯಾಸದ ಫಲವಾಗಿ ಒಡಮೂಡುವ ವಿಶಿಷ್ಟ ಸತ್ಯ. ಆ ಬಗೆಯ ಸತ್ಯದ ಹೊಳಹುಗಳಿಗೆ ಕಾಲಾತೀತವಾಗಿ ಎಂದೂ ಸಮಸ್ಯೆಗಳು ಬರುವುದಿಲ್ಲ. ಅಂತಹ ಅಧ್ಯಯನಗಳು ಪರಾಂಬರಿಸಿ ನೋಡುವುದರಿಂದ  ಸಾಧ್ಯವಾಗುತ್ತದೆ ಎಂದರು.  ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಚೇತನ್ ಮುಂಡಾಜೆ ಅವರು ಪ್ರಶಸ್ತಿ ಪುರಸ್ಕೃತರ ಕುರಿತಾಗಿ ಅಭಿನಂದನಾ ಮಾತುಗಳನ್ನಾಡಿದರು.  ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಜಿ. ಪೈ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಶಸ್ತಿಯ ಪ್ರಾಯೋಜಕರಾದ  ಡಾ. ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ಆರ್.ಆರ್.ಸಿಯ ಸಹಸಂಶೋಧಕ ಡಾ. ಅರುಣ್‌ಕುಮಾರ್‌ಎಸ್.ಆರ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Wednesday, June 10, 2026

ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರಕ್ಕೆ ಡಾ. ಜಿ.ಶಂಕರ್ ಸ.ಮ.ಪ್ರ.ದ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯರ ಭೇಟಿ

 



ದಿನಾಂಕ: ೦೨.೦೬.೨೦೨೬ರಂದು ಡಾ. ಜಿ.ಶಂಕರ್ ..ಪ್ರ. ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯರು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿಯ  ಗ್ರಂಥಾಲಯ, ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಆರ್.ಆರ್.ಸಿಯ ದಾಖಲೀಕರಣ ಮುಂತಾದ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಆಡಳಿತಾಧಿಕಾರಿಗಳಾದ ಡಾ.ಬಿ. ಜಗದೀಶ್ ಶೆಟ್ಟಿ ಹಾಗೂ ಆರ್.ಆರ್.ಸಿಯ ಸಹ ಸಂಶೋಧಕರಾದ ಡಾ. ಅರುಣ್ ಕುಮಾರ್ ಎಸ್.ಆರ್ ಅವರಿಂದ ಪಡೆದರು. ಉಪನ್ಯಾಸಕರಾದ ಡಾ.ನಿಕೇತನ ಅವರು ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕೆ ಬೇಕಾದ  ಎಲ್ಲಾ ಮಾಹಿತಿಗಳನ್ನು ಇಲ್ಲಿಂದಲೇ ಪಡೆದು ಶಿಕ್ಷಕರ, ವಿದ್ಯಾರ್ಥಿಗಳ ಪರಂಪರೆ ಮುಂದುವರಿಯಬೇಕೇಂಬುದಾಗಿ ತಿಳಿಸಿ, ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಅವರೊಂದಿಗೆ ಡಾ. ಪ್ರಸನ್ನಮೊದಲಾದ ಉಪನ್ಯಾಸಕರು ಹಾಜರಿದ್ದರು.



Thursday, June 4, 2026

2026-2027ನೇ ಸಾಲಿನ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಜಂಟಿ ಹೆಸರಿನ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಡಾ. ಬೋಳಾರ ಶಿವರಾಮ ಶೆಟ್ಟಿ ಆಯ್ಕೆ

 

ಕನ್ನಡ ಹಾಗೂ ತುಳು ಭಾಷೆ, ಸಾಹಿತ್ಯ, ಜಾನಪದ, ಸಂಶೋಧನ ಕ್ಷೇತ್ರಗಳಲ್ಲಿ ವಿದ್ವಾಂಸರಲ್ಲೊಬ್ಬರಾದ ಡಾ. ಬೋಳಾರ ಶಿವರಾಮ ಶೆಟ್ಟಿ ಅವರು ೨೦೨೬ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ (ಜಂಟಿ ಹೆಸರಲ್ಲಿ) ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಇವರಿಬ್ಬರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂನ್ ೨೦, ೨೦೨೬ರಂದು ನಡೆಯಲಿರುವುದು. ಪ್ರಶಸ್ತಿಯು ರೂ ೨೦೦೦೦/- ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಡಾ.  ಬಿ.  ಶಿವರಾಮ ಶೆಟ್ಟಿಯವರು ೧೯೫೭ರ ಅಕ್ಟೋಬರ್ ೩ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬೋಳಾರದಲ್ಲಿ ಜನಿಸಿದರು. ತಂದೆ ದಿವಂಗತ ಬೋಳಾರ ಚಂದಪ್ಪ ಶೆಟ್ಟಿ ಹಾಗೂ ತಾಯಿ ದಿವಂಗತ ಸೇಸಮ್ಮ. ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಮಂಗಳ ಗಂಗೋತ್ರಿಯ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನ ಕೇಂದ್ರದ ಮೂಲಕ ಸ್ನಾತಕೋತ್ತರ ಪದವಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದಿಂದತುಳುನಾಡಿನ ಸಸ್ಯಜಾನಪದವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ೧೯೮೧ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ, ಉಪನ್ಯಾಸಕರಾಗಿ, ಪ್ರಾಧ್ಯಾಪಕ ಹಾಗೂ ಸಂಸ್ಥೆಯ ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ೨೦೧೯ರಲ್ಲಿ ನಿವೃತ್ತರಾದರು. 

 ಇವರ ಮಾರ್ಗದರ್ಶನದಲ್ಲಿ ೧೦ ಮಂದಿ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕನ್ನಡ ಮತ್ತು ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ೧೩೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಮಂಡಿಸಿದ್ದಾರೆ. ಇವರ ಸಂಪಾದಕತ್ವದಲ್ಲಿ ಸುಮಾರು ೫೦ಕ್ಕೂ ಅಧಿಕ ಸಂಶೋಧನಾ ಲೇಖನಗಳು ಹಾಗೂ ೧೯ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಮಂಗಳೂರು ವಿ.ವಿ ಕನಕದಾಸ ಅಧ್ಯಯನ ಪೀಠ ಮತ್ತು ಸಂಶೋಧನ ಕೇಂದ್ರದ ಸಂಯೋಜಕರಾಗಿ ಹಲವು ಮಹತ್ವದ ಪ್ರಕಟಣೆಗಳನ್ನು  ಹೊರತರುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕನಕ ಚಿಂತನ ಪ್ರಚಾರೋಪನ್ಯಾಸ ಮಾಲಿಕೆಯಂತಹ ಅನೇಕ ಕನಕನಿಗೆ ಸಂಬಂಧಿಸಿದ ಯೋಜನೆಗಳನ್ನು ಜ್ಯಾರಿಗೊಳಿಸಿದ್ದಾರೆಶಿವರಾಮ ಶೆಟ್ಟಿ ಅವರು ಎಸ್. ವಿ.ಪಿ ಕನ್ನಡ ಅಧ್ಯಂiÀi ಸಂಸ್ಥೆಯ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಸಂಶೋಧನೆಗೆ ಸಂಬಂಧಪಟ್ಟ ವಿನೂತನ ಕಾರ್ಯಕ್ರಮಗಳೊಂದಿಗೆ ೧೯೬೮ರಿಂದ ಇಲ್ಲಿಯವರೆಗಿನ ವಿದ್ಯಾರ್ಥಿಗಳು, ಸಂಶೋಧನ ಪದವೀಧರರು, ಅಧ್ಯಾಪಕರು ಹಾಗೂ ಸಿಬ್ಬಂದಿಗಳನ್ನೊಳಗೊಂಡ ಗಿಳಿವಿಂಡಿನ ಸ್ಥಾಪಕರೂ ಆಗಿದ್ದಾರೆ. ಅಲ್ಲದೆ ಯು.ಜಿ.ಸಿ ಸ್ಯಾಪ್ ಯೋಜನೆಯ ಸಂಯೋಜಕರಾಗಿ, ಗ್ಯಾನ್ ಯೋಜನೆಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗೆ ನಿರಂತರ ಅಧ್ಯಯನ, ಅಧ್ಯಾಪನ, ಸಂಶೋಧನೆ, ಸಂಪಾದನೆ, ಸಂಘಟನೆಯ ಮೂಲಕ ಕ್ರಿಯಾಶೀಲರಾಗಿರುವ ಇವರು ಕರ್ನಾಟಕ ಸರ್ಕಾರದಕನಕ ಗೌರವಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ ೨೦೨೨-೨೩ನೇ ಸಾಲಿನಕನಕಶ್ರೀಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Tuesday, June 2, 2026

ಶ್ರೀ ಸುಖಾನಂದ ಶೆಟ್ಟಿ ಅವರಿಗೆ ಡಾಕ್ಟರೇಟ್ (26.05.2026)

 


ಉಡುಪಿ: ಶ್ರೀ ಸುಖಾನಂದ ಶೆಟ್ಟಿ  ಅವರುಕೊಲ್ಲೂರು ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದ ಕುರಿತಾಗಿ ನಡೆಸಿದ ಸಂಶೋಧನೆಗೆ ಮಣಿಪಾಲ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಅವರು ಸಂಶೋಧನೆಯನ್ನು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ (ಆರ್.ಆರ್.ಸಿ) ಮೂಲಕಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರೇಖಾ ಬನ್ನಾಡಿ ಅವರ ಮಾರ್ಗದರ್ಶನದಲ್ಲಿ ನಡೆಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಎಚ್.ಬಿ. ಬಾಬಯ್ಯ ಶೆಟ್ಟಿ ಮತ್ತು ಶಾರದಾ ಬಿ.ಶೆಟ್ಟಿಯವರ ಪುತ್ರರಾದ ಇವರು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.