

ಡಾ. ಶಿವರಾಮ ಕಾರಂತರು ಸಾಹಿತಿ, ಮಾನವತಾವಾದಿ, ಪರಿಸರಪ್ರೇಮಿ, ಉತ್ತರಕನ್ನಡ ಜಿಲ್ಲೆಯ ಕೈಗಾದಲ್ಲಿ ಅಣುಸ್ಥಾವರವಾದಾಗ ಅದರ ವಿರುದ್ಧ ಪ್ರತಿಭಟನೆಗೆ ಇಳಿದ ಮೊದಲಿಗರು. ಅದಕ್ಕೋಸ್ಕರ ದೇಶದ ಲೋಕಸಭಾ ಮಹಾಚುನಾವಣೆಯಲ್ಲಿ ಕಾರವಾರದಿಂದ ಚುನಾವಣೆಗೆ ನಿಂತು ಸ್ಪರ್ಧಿಸಿದರು. ನಾನು ರಾಜಕೀಯ ವ್ಯಾಮೋಹಿಯಲ್ಲ, ಬದಲು ಪರಿಸರ ಹಾನಿಯ ವಿರೋಧಿ. ಕೈಗಾ ಅಣುಸ್ಥಾವರ ಬಂದರೆ ಉತ್ತರಕನ್ನಡದ ಜೀವವೈವಿಧ್ಯ, ಕಾಡು ಪರಿಸರ ನಾಶವಾಗುತ್ತದೆ. ಅದಕ್ಕಾಗಿ ನಾನು ಚುನಾವಣೆಗೆ ನಿಲ್ಲುತ್ತೇನೆ. ಪರಿಸರ ಜಾಗೃತಿಗಾಗಿ ನಾನು ಮನೆಮನೆ ಸುತ್ತಾಡುವೆ, ಹೊರತು ಅಧಿಕಾರಕ್ಕಾಗಿ ಅಲ್ಲ, ಎಂಬುದಾಗಿ ಲೋಕಸಭಾ ಚುನಾವಣೆಗೆ ನಿಂತು ೬೦,೦೦೦ ಸಾವಿರ ಮತಗಳನ್ನು ಪಡೆದು ಸೋತರೂ ಉತ್ತರಕನ್ನಡದ ಪರಿಸರಕ್ಕಾಗಿ ಹೋರಾಡಿದ ಮಹಾನುಭಾವ. ಅವರಂತಹ ಚಿಂತಕರು, ಸಮಾಜಪ್ರೇಮಿಗಳನ್ನೂ ನಾವು ಕಾಣಲಾರೆವು ಎಂಬುದಾಗಿ ಮಾಹೆಯ ಸಹಕುಲಪತಿಗಳಾದ ಡಾ. ನಾರಾಯಣ ಸಭಾಹಿತ್ ಅವರು ಹೇಳಿದರು. ಅವರು ದಿನಾಂಕ: ೧೦.೧೦.೨೦೨೫ರಂದು ಯಕ್ಷಗಾನ ಕೇಂದ್ರ ಇಂದ್ರಾಳಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಸಹಯೋಗದಲ್ಲಿ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರಮಂಟಪದಲ್ಲಿ ನಡೆದ ಡಾ. ಕೋಟ ಶಿವರಾಮ ಕಾರಂತರ ೧೨೩ನೇ ಜನ್ಮದಿನಾಚರಣೆ ಹಾಗೂ ಯಕ್ಷಗಾನ ಪೂರ್ವರಂಗ ಕೃತಿ ಅನಾವರಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಕಾರಂತರು ನಡೆದಾಡುವ ವಿಶ್ವಕೋಶ. ಯಕ್ಷಗಾನದ ಮೇಲೆ ಅವರ ಪ್ರಯೋಗಗಳು, ಚಿಂತನೆಗಳು ಇಂದ್ರಾಳಿಯ ಯಕ್ಷಗಾನ ಕೇಂದ್ರದ ಮೂಲಕವೇ ಆಗುತ್ತಿತ್ತು. ಯಕ್ಷಗಾನ ಕೇಂದ್ರ ಹಾಗೂ ಕರಾವಳಿಯ ಯಕ್ಷಗಾನದ ಬೆಳವಣಿಗೆಯಲ್ಲಿ ಅವರ ಅಪಾರಕೊಡುಗೆಯನ್ನು ಗಮನಿಸಿ ಅವರ ಜನ್ಮದಿನವನ್ನು ಪ್ರತಿವರ್ಷವೂ ಅದ್ದೂರಿಯಾಗಿ ಮಾಡಬೇಕೆಂಬುದು ಮಾಹೆಯ ಸಂಕಲ್ಪ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆದಿದೆ. ಜೊತೆಗೆ ಡಾ. ಶಿವಕುಮಾರ್ ಅಳಗೋಡು ಅವರ ‘ಯಕ್ಷಗಾನ ಪೂರ್ವರಂಗ’ ಕೃತಿಯ ಲೋಕಾರ್ಪಣೆಯನ್ನು ಈ ಸಂದರ್ಭದಲ್ಲಿ ನಡೆಸಿದುದು ಔಚಿತ್ಯಪೂರ್ಣವೆಂದು ಹೇಳಿದರು.
ಕಾಪು ಸರಕಾರಿ ಪ್ರ.ದ.ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ರವಿರಾಜ ಶೆಟ್ಟಿಯವರು ಕಾರಂತರ ಸಂಸ್ಮರಣೆಯ ಮಾತುಗಳನ್ನಾಡುತ್ತಾ, ‘ಕಾರಂತರು ತಮ್ಮ ಅಧ್ಯಯನದ ಕಾರಣಕ್ಕೆ ೪೦೦ಕ್ಕೂ ಮಿಕ್ಕಿ ಕೃತಿಗಳನ್ನು ಸಾರಸ್ವತಲೋಕಕ್ಕೆ ನೀಡಿದ್ದಲ್ಲದೆ, ಯಕ್ಷಗಾನ, ನಾಟಕದಂತಹ ಕಲಾಪ್ರಕಾರಗಳನ್ನು ಭಿನ್ನವಾಗಿ ರೂಪಿಸಿದ ಪ್ರಯೋಗಶೀಲ ವ್ಯಕ್ತಿತ್ವ. ಅವರ ಸ್ಮರಣೆ ಸದಾ ಅಗತ್ಯ ಎಂಬುದಾಗಿ ಸೋದಾರಣವಾಗಿ ತಿಳಿಸಿದರು.
ಲೋಕಾರ್ಪಣೆಗೊಂಡ ಕೃತಿ ಡಾ. ಶಿವಕುಮಾರ್ ಅಳಗೋಡು ಅವರ ‘ಯಕ್ಷಗಾನ ಪೂರ್ವರಂಗ’ದ ಕುರಿತು ಕೃತಿಪರಿಚಯ ಮಾಡಿ ಮಾತನಾಡಿದ ಹಿರಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣುಭಟ್ಟರು ಇದೊಂದು ಅಪೂರ್ವ ಕೃತಿ. ಯಕ್ಷಗಾನ ಶಾಸ್ತ್ರೀಯ ಚೌಕಟ್ಟಿನಲ್ಲಿ ಬರುವ ಪ್ರಕಾರ. ಅದರ ಪೂರ್ವರಂಗದ ಕುರಿತು ಅಧ್ಯಯನಗಳನ್ನು ಗಮನಿಸಿ, ವಿಸ್ತöÈತ ಕ್ಷೇತ್ರಕಾರ್ಯವನ್ನೊಳಗೊಂಡು ಸಮಗ್ರ ಮಾಹಿತಿಗಳನ್ನೊಳಗೊಂಡ ಅಧ್ಯಯನಗ್ರಂಥವಿದು. ಇಂತಹ ಹಲವು ಅಧ್ಯಯನಗಳು ಕೃತಿಕಾರರಿಂದ ಇನ್ನಷ್ಟು ನಡೆಯಲಿ ಎಂಬುದಾಗಿ ಕೃತಿ ಪರಿಚಯದೊಂದಿಗೆ ಹಾರೈಸಿದರು.
ವೇದಿಕೆಯಲ್ಲಿ ಯಕ್ಷಗಾನ ಕೇಂದ್ರದ ಸಲಹಾಸಮಿತಿಯ ಅಧ್ಯಕ್ಷರಾದ ಶ್ರಿ ಪಳ್ಳಿಕಿಶನ್ ಹೆಗ್ಡೆಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಶಿವಕುಮಾರ್ ಅಳಗೋಡು ಕೃತಿಕಾರನ ನೆಲೆಯಲ್ಲಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ ಬಿ. ಜಗದೀಶ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಕೇಂದ್ರದ ಗುರು ಉಮೇಶ್ ಸುವರ್ಣ ಮತ್ತು ಬಳಗದವರಿಂದ ಪ್ರಾರ್ಥನಾರೂಪದ ಯಕ್ಷಗಾನದ ಹಾಡಿನ ಪ್ರಸ್ತುತಿಯಿತ್ತು. ಆರ್.ಆರ್.ಸಿಯ ವತಿಯಿಂದ ಕಾರಂತರ ಕುರಿತಾದ ಸಾಕ್ಷ÷್ಯಚಿತ್ರ ಪ್ರದರ್ಶನ ಹಾಗೂ ಕಾರಂತರ ಅಪೂರ್ವ ಭಾವಚಿತ್ರಗಳ ಪ್ರದರ್ಶನ ನಡೆಯಿತು. ಆರ್.ಆರ್.ಸಿ ಸಹ ಸಂಶೋಧಕರಾದ ಡಾ. ಅರುಣ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ‘ಭೀಷ್ಮೋತ್ಪತ್ತಿ’ ಯಕ್ಷಗಾನ ಪ್ರದರ್ಶನ ನಡೆಯಿತು.












No comments:
Post a Comment